ಕುಂದಾಪುರ: ವಿದ್ಯಾರ್ಥಿ ಆತ್ಮಹತ್ಯೆ

Update: 2024-09-05 16:23 GMT

ಕುಂದಾಪುರ, ಸೆ.5: ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿಸಿ, ಮುಂದಿನ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿದ್ದ ತಾಲೂಕಿನ ಹಳ್ನಾಡು ಗ್ರಾಮದ ಶಿವಪ್ರಸಾದ್ ಎಂಬವರ ಪುತ್ರ ಸುಪ್ರಜ ಶೆಟ್ಟಿ (17) ಯಾವುದೋ ಕಾರಣದಿಂದ ಬೇಸತ್ತು ಮನೆ ತೋಟದ ಬಳಿ ಇರುವ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಸುಪ್ರಜ ಶೆಟ್ಟಿ ಬುಧವಾರ ಬೆಳಗ್ಗೆ 9 ಗಂಟೆಗೆ ಮನೆಯಲ್ಲಿ ತಿಂಡಿ ತಿಂದು ತೋಟದ ಕಡೆಗೆ ಹೋಗಿ ಬರುವುದಾಗಿ ತಿಳಿಸಿ ಹೊರಗೆ ಹೋಗಿದ್ದು, ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಗಾಬರಿಯಾದ ಮನೆಯವರು ಅಕ್ಕಪಕ್ಕ ನೆರೆಕೆರೆಯಲ್ಲಿ ಹುಡುಕಾಡಿದರೂ ಎಲ್ಲೂ ಕಾಣದಿದ್ದಾಗ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಆದರೆ ಕಾಣೆಯಾದ ಸುಪ್ರಜ ಶೆಟ್ಟಿ ಧರಿಸುತಿದ್ದ ಚಪ್ಪಲಿ ತೋಟದ ಹೊಳೆ ಬದಿಯ ದಡದಲ್ಲಿ ಕಂಡುಬಂದಿದ್ದು, ಹೊಳೆಯ ನೀರಿನಲ್ಲಿ ಸ್ಥಳೀಯರು ಹಾಗೂ ಮುಳುಗು ತಜ್ಞರ ಸಹಾಯದಿಂದ ಹುಡುಕಿದಾಗ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಹೊಳೆಯ ದಡದಲ್ಲಿ ಮೃತ ಶರೀರ ಪತ್ತೆಯಾಯಿತು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News