ರಾಜ್ಯ ಸರಕಾರದಿಂದ ಕರಾವಳಿಯ 3 ಜಿಲ್ಲೆಗಳ ನಿರ್ಲಕ್ಷ್ಯ: ಆರೋಪ

Update: 2024-09-16 14:43 GMT

ಉಡುಪಿ, ಸೆ.16: ರಾಜ್ಯ ಸರಕಾರ ಕರಾವಳಿಯ ಮೂರು ಜಿಲ್ಲೆಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಒಂದು ರೂಪಾಯಿ ಅನುದಾನ ಬಿಡುಗಡೆಯಾಗಿಲ್ಲ. ಇದೇ ಪ್ರವೃತ್ತಿ ಮುಂದುವರಿದರೆ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದು ಉಡುಪಿ ಜಿಲ್ಲೆಯ ಐವರು ಬಿಜೆಪಿ ಶಾಸಕರು, ಸಂಸತ್ ಸದಸ್ಯರೊಂದಿಗೆ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ನಗರದ ಹೊಟೇಲ್ ಕಿದಿಯೂರು ಸಭಾಂಗಣದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ಐವರು ಶಾಸಕ ಪರವಾಗಿ ಮಾತನಾಡಿದ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಈ ವಿಷಯ ತಿಳಿಸಿದರು.

ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಒಂದೂವರೆ ವರ್ಷಗಳ ಹಿಂದೆ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕರಾವಳಿಯ ಜಿಲ್ಲೆಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಶಾಸಕರಿಗೆ ಅನುದಾನವೇ ಬಿಡುಗಡೆಯಾಗುತ್ತಿಲ್ಲ. ಜಿಲ್ಲಾಡಳಿತ ನಿರಂತರವಾಗಿ ಅಸಹಕಾರ ತೋರುತ್ತಿದೆ. ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಶಾಸಕರೆಲ್ಲರ ಪರವಾಗಿ ಸುನಿಲ್‌ಕುಮಾರ್ ಆರೋಪಗಳ ಸುರಿಮಳೆಗೆರೆದರು.

ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ, ಪರಿಸ್ಥಿತಿಯನ್ನು 10 ದಿನದೊಳಗೆ ಸರಿಪಡಿಸದಿದ್ದರೆ, ಅನುದಾನ ಬಿಡುಗಡೆಗೆ ಆಗ್ರಹಿಸಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬಿಜೆಪಿ ಶಾಸಕರೆಲ್ಲರೂ ಸೇರಿ ಮುಖ್ಯಮಂತ್ರಿಗಳ ಮನೆ ಮುಂಧ ಧದಣಿ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ಈ ಧರಣಿಗೆ ಸರಕಾರ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಸಿಎಂ ವಾಗ್ದಾನ ಏನಾಯಿತು?: ಕಳೆದ ಮಳೆಗಾಲದಲ್ಲಿ ಜುಲೈ ತಿಂಗಳಲ್ಲಿ ಭಾರೀ ಮಳೆಯಿಂದಾದ ಹಾನಿಯ ಪರಿಶೀಲ ನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಿಲ್ಲೆಗೆ ಆಗಮಿಸಿದ್ದರು. ಬಳಿಕ ಅವರು ಕೆಡಿಪಿ ಸಭೆ ಕರೆದಿದ್ದರು. ಅಂದು ಸಿಎಂ ಉಪಸ್ಥಿ ತಿಯಲ್ಲಿ ನಡೆದ ಕೆಡಿಪಿ ಸಭೆಯ ಯಾವೊಂದು ನಿರ್ಣಯವೂ ಈವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಹಾಗಿದ್ದರೆ ಸಿಎಂ ಅವರ ಮಾತಿಗೇನು ಬೆಲೆ ಬಂತು ಎಂದು ಸುನಿಲ್‌ಕುಮಾರ್ ಪ್ರಶ್ನಿಸಿದರು.

ಸಭೆಯಲ್ಲಿ ಕಾಲುಸಂಕಗಳ ತುರ್ತು ನಿರ್ಮಾಣಕ್ಕೆ 50 ಕೋಟಿ ರೂ. ಕೊಡುತ್ತೇನೆ ಎಂದಿದ್ದರು. 2023ರ ಮಳೆಯಿಂದ ಗ್ರಾಮೀಣ ರಸ್ತೆಗಾದ ಹಾನಿಯ ರಿಪೇರಿಗೆ ಈವರೆಗೆ ಹಣ ಬಂದಿಲ್ಲ. ಬೆಳೆ ಹಾನಿ, ಶಾಲಾ ಕಟ್ಟಡ ರಿಪೇರಿ ಹಣ ನೀಡಿಲ್ಲ. ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಬಿಡಿ ಕಾಸು ಸಹ ಕೊಟ್ಟಿಲ್ಲ. ಕಳೆದೆರಡು ಎರಡು ಬಜೆಟ್‌ನಲ್ಲಿ ಉಡುಪಿಗೆ ಯಾವುದೇ ಯೋಜನೆ ನೀಡಿಲ್ಲ ಎಂದವರು ಕಿಡಿಕಾರಿದರು.

ಈ ಬಾರಿಯ ಭಾರೀ ಮಳೆಯಿಂದ ಜಿಲ್ಲೆಯಲ್ಲಾದ ಸಮಗ್ರ ಹಾನಿಗಾಗಿ ಜಿಲ್ಲಾಡಳಿತ 240 ಕೋಟಿ ರೂ.ಗಳ ವರದಿಯನ್ನು ಸರಕಾರಕ್ಕೆ ಕಳುಹಿಸಿದೆ. ಆದರೆ ಸರಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ಇದು ಕರಾವಳಿಯ ನಿರ್ಲಕ್ಷ್ಯವಲ್ಲದೆ ಮತ್ತಿ ನ್ನೇನು ಎಂದು ಪ್ರಶ್ನಿಸಿದ ಅವರು, ಐವರು ಬಿಜೆಪಿ ಶಾಸಕರು ಇದ್ದಾರೆ ಎನ್ನುವ ಕಾರಣಕ್ಕೆ ಅನುದಾನ ನೀಡುತ್ತಿಲ್ಲ ಎಂದು ನೇರವಾಗಿ ಆರೋಪಿಸಿದರು.

ಜಿಲ್ಲೆಯ ತಾಲೂಕು ಮಟ್ಟದ ಅಧಿಕಾರಿಗಳ ನಿರಂತರ ವರ್ಗಾವಣೆ ದಂಧೆ ನಡೆಯುತ್ತಿದೆ. ಶಾಸಕರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅಸಹಕಾರ ತೋರುತಿದ್ದಾರೆ. ಸಚಿವರು ಜನಸ್ಪಂದನ ಸಭೆಗಳನ್ನು ನಡೆಸುತ್ತಿಲ್ಲ. ದಿವಾಳಿಯಾದ ಸರಕಾರದಲ್ಲಿ ಉಸ್ತುವಾರಿ ಸಚಿವರು ಕೆಡಿಪಿ ಸಭೆಯನ್ನು ಹೇಗೆ ನಡೆಸುತ್ತಾರೆ. ಜನಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಏನೆಂದು ಉತ್ತರಿಸುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಕೆಡಿಪಿ ಸಭೆಗಳೇ ನಡೆಯುತ್ತಿಲ್ಲ ಎಂದವರು ದೂರಿದರು.

ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ರಸ್ತೆಗಳ ಪ್ಯಾಚ್ ವರ್ಕ್‌ಗೂ ಹಣ ನೀಡಿಲ್ಲ. ಗ್ರಾಮೀಣ ರಸ್ತೆಗಳಲ್ಲಿ ಓಡಾಡುವ ಸ್ಥಿತಿ ಇಲ್ಲ. ಕರಾವಳಿಯ ಎಲ್ಲಾ ಬಿಜೆಪಿಯ ಶಾಸಕರು ಸಚಿವರ ಮುಂದೆ, ಇಲಾಖೆಗಳ ಮುಂದೆ ನಮ್ಮ ಬೇಡಿಕೆಗಳನ್ನು ಇಟ್ಟಿ ದ್ದೇವೆ. ಈ ಬೇಡಿಕೆಗಳಿಗೆ ಸ್ಪಂದಿಸಿ ಸರಕಾರ ತಕ್ಷಣ ಅನುದಾನವನ್ನು ಬಿಡುಗಡೆ ಮಾಡಬೇಕು. 10 ದಿನದೊಳಗೆ ಅನು ದಾನ ಬಿಡುಗಡೆಯಾಗದಿದ್ದರೆ ಅನುದಾನಕ್ಕೆ ಆಗ್ರಹಿಸಿ ಸಿಎಂ ಮನೆ ಮುಂದೆ ಧರಣಿ ಕೂರುತ್ತೇವೆ ಎಂದವರು ಘೋಷಿಸಿದರು.

ನಮ್ಮ ಮನವಿಗೆ ಹತ್ತು ದಿನದಲ್ಲಿ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು. ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಮೊದಲನೇ ಹಂತ. ಆಗಲೂ ಸ್ಥಿತಿಯಲ್ಲಿ ಬದಲಾವಣೆಯಾಗದಿದ್ದರೆ ಎರಡನೇ ಹಂತದಲ್ಲಿ ಎರಡು ಜಿಲ್ಲೆಗಳಲ್ಲಿ ಜನಾಂದೋಲನವನ್ನು ಹಮ್ಮಿಕೊಳ್ಳಲಿದ್ದಾರೆ. ಶಾಸಕರು ರಸ್ತೆಗೆ ಇಳಿಯುವ ಮುಂಚೆ ಸರಕಾರ ಎಚ್ಚೆತ್ತುಕೊಂಡು ಕರಾವಳಿಗೆ ನ್ಯಾಯ ಕೊಡಬೇಕು ಎಂದವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News