ಸೈಬರ್ ವಂಚಕರಿಂದ ಎಚ್ಚರ ಅಗತ್ಯ: ಎಸ್ಸೈ ಹರೀಶ್

Update: 2024-10-06 12:07 GMT

ಕುಂದಾಪುರ, ಅ.6: ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು, ವೃತ್ತಿಪರರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದು ಸೈಬರ್ ಅಥವಾ ಆನ್‌ಲೈನ್‌ನಲ್ಲಿ ವ್ಯವಹರಿಸುವಾಗ ಹೆಚ್ಚು ಎಚ್ಚರದಿಂದ ಇರಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹರೀಶ್ ಆರ್. ಹೇಳಿದ್ದಾರೆ.

ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನ ಕಥೊಲಿಕ್ ಸಭಾ ಘಟಕ, ಮಾಧ್ಯಮ ಆಯೋಗ ಜಂಟಿಯಾಗಿ ರವಿವಾರ ಆಯೋಜಿಸಲಾದ ಸೈಬರ್ ಕ್ರೈಮ್ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಸೈಬರ್ ಅಥವಾ ಆನ್‌ಲೈನ್ ಅಪರಾಧ ನಡೆದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರೆ ವಂಚನೆಗೊಳಗಾಗಿ ಕಳೆದು ಕೊಂಡು ಹಣವನ್ನು ವಾಪಾಸ್ ಪಡೆಯಬಹುದು. ವಂಚನೆಗೆ ಒಳಗಾಗಿರುವುದು ಗೊತ್ತಾದ ತಕ್ಷಣವೇ, 1930 ಸಹಾಯ ವಾಣಿಗೆ ಕರೆ ಮಾಡಬಹುದು ಅಥವಾ ಎನ್‌ಸಿಆರ್‌ಪಿ ಪೋರ್ಟಲ್ ಮೂಲಕ ಕೂಡ ದೂರು ನೀಡಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ವಿವಿಧ ತಾಂತ್ರಿಕ ಶೈಲಿಯ ಸೈಬರ್ ಅಪರಾಧಗಳು ನಡೆಯುತ್ತಿದ್ದು ಹ್ಯಾಕರ್ಸ್ ಮೂಲಕ ಖಾಸಗಿ ಮಾಹಿತಿ ಕದಿಯಲಾಗುತ್ತದೆ. ಬ್ಯಾಂಕಿನವರೆಂದು ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ಒಟಿಪಿ ನಂಬರನ್ನು ಕೇಳಿದರೆ ಯಾರಿಗೂ ನೀಡಿ ಖಾತೆಯಲ್ಲಿರುವ ಹಣ ಕಳೆದು ಕೊಳ್ಳಬೇಡಿ. ಹಣ ಮಾಡುವ ಧಾವಂತದಲ್ಲಿ ನಿಮ್ಮ ಹಣ ಕಳೆದು ಕೊಳ್ಳಬೇಡಿ ಎಂದು ಅವರು ಮಾಹಿತಿ ನೀಡಿದರು.

ಆಪ್ ಮೂಲಕ ಸಾಲ ತೆಗೆಯಬೇಡಿ, ಮೊಬೈಲ್ ಸ್ಟೇಟಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂಗೆ ನಿಮ್ಮ ಫೋಟೋವನ್ನು ಹಾಕುವಾಗ ಜಾಗರೂಕರಾಗಿರ ಬೇಕು. ಕಸ್ಟಮ್ಸ್, ಆದಾಯ ತೆರಿಗೆ, ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳು ಫೋನ್ ಅಥವಾ ಇ ಮೇಲ್ ಮೂಲಕ ಬ್ಯಾಂಕ್ ಖಾತೆಯ ಮೂಲಕ ಮಾಹಿತಿಯನ್ನು ಕೇಳುವುದಿಲ್ಲ ಎಂದು ಅವರು ತಿಳಿಸಿದರು.

ಎಂಸಿ ಬ್ಯಾಂಕ್ ಬ್ರಹ್ಮಾವರ ಶಾಖೆಯ ಪ್ರಬಂಧಕ ಒವಿನ್ ರೆಬೆಲ್ಲೊ ಸೈಬರ್ ಕ್ರೈಂ ಮತ್ತು ಡಿಜಿಟಲ್ ಪಾವತಿ ಕುರಿತು ಮಾಹಿತಿ ನೀಡಿ ನಮ್ಮಲ್ಲಿರುವ ಡೆಬಿಟ್ ಹಾಗೂ ಕ್ರೆಡೀಟ್ ಕಾರ್ಡ್‌ಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕಾಗಿದ್ದು ಸುಳ್ಳು ಹೇಳಿ ವೃದ್ಧರನ್ನು, ಹಿರಿಯ ನಾಗರಿಕರನ್ನು ವಂಚಿಸುವುದು ಹೆಚ್ಚಾಗುತ್ತಿದ್ದು ಈ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅನಗತ್ಯವಾಗಿ ಡಿಜಿಟಲ್ ಪೇಮೆಂಟ್ ಮಾಡುವುದನ್ನು ಕಡಿವಾಣಗೊಳಿಸಿ ನಗದು ಪಾವತಿ ಮಾಡುವುದ ರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು. ಸುಲಭ ಹಣದ ಭರವಸೆ ನೀಡುವ ಯೋಜನೆಗಳಿಗೆ ಸಾರ್ವಜನಿಕರು ಎಚ್ಚರವಾಗಿರ ಬೇಕು ಎಂದರು.

ಚರ್ಚಿನ ಧರ್ಮಗುರು ವಂ.ಥೋಮಸ್ ರೋಶನ್ ಡಿಸೋಜ, ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷ ಎಡ್ವರ್ಡ್ ಫೆರ್ನಾಂಡಿಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಮಾಜಿ ಅಧ್ಯಕ್ಷ ಎಲ್ ರೋಯ್ ಕಿರಣ್ ಕ್ರಾಸ್ತಾ ಉಪಸ್ಥಿತರಿ ದ್ದರು. ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಿರಣ್ ಕ್ರಾಸ್ತಾ ವಂದಿಸಿದರು. ರೆನಿಟಾ ಬಾರ್ನೆಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News