ಕಸ್ತೂರಿರಂಗನ್ ವರದಿ ವಿರೋಧಿಸಿ ಬೆಳ್ವೆ ಗ್ರಾಮಸ್ಥರಿಂದ ಪ್ರತಿಭಟನೆ

Update: 2024-10-07 13:46 GMT

ಕುಂದಾಪುರ, ಅ.7: ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಬೆಳ್ವೆ ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಪಂ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟಿ, ಕರಾವಳಿ ಜಿಲ್ಲೆಯ ಜನರಿಗೆ ಸಮುದ್ರ ಭಾಗದಲ್ಲಿ ಸಿ.ಆರ್.ಝಡ್ ಹಾಗೂ ಮಲೆನಾಡು ಹಾಗೂ ಇತರೆ ಭಾಗದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಕೃಷಿ-ಕೂಲಿಕಾರರು ವ್ಯಥೆ ಅನುಭವಿಸುವಂತಾಗಿದೆ. ಪಶ್ಚಿಮ ಘಟ್ಟ ಉಳಿಸುವುದು, ಅರಣ್ಯ ನಾಶ ತಡೆ ಯುವ ನೆಪದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಮುಂದಾಗಿದೆ. ಭೌಗೋಳಿಕ ಸಮೀಕ್ಷೆ ನಡೆಸದೆ ಸ್ಯಾಟಲೈಟ್ ಸಮೀಕ್ಷೆ ಮೂಲಕ ವರದಿ ನೀಡಿ ಜನರು ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕಸ್ತೂರಿರಂಗನ್ ವರದಿ ಅನುಷ್ಠಾನ ಅವೈಜ್ಣಾನಿಕ ಎಂದು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಒಕ್ಕೋರಲ ತೀರ್ಮಾನ ಮಾಡಬೇಕು ಎಂದರು.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಈ ವರದಿ ಅನುಷ್ಠಾನಕ್ಕೆ ಬಂದರೆ ಜನರು ಜೀವನ ನಡೆಸುವುದು ಕಷ್ಟವಾಗಲಿದೆ. ಸೆ.19 ರಂದು ಎಲ್ಲಾ ಶಾಸಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಸಂಪುಟದಲ್ಲಿ ಚರ್ಚೆ ನಡೆಸಿದ ಬಳಿಕ ಕಸ್ತೂರಿ ರಂಗನ್ ವರದಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡದಿರಲು ತೀರ್ಮಾನಿಸಿದೆ. ಕೇರಳ ಮಾದರಿ ಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ವೇ ನಡೆಸಿ ವರದಿ ತಯಾರಿಸಿ ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ನೀಡುವುದು ಸೂಕ್ತ. ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಶಾಸಕರು ಒಗ್ಗೂಡಿ ಸರಕಾರದ ಗಮನ ಸೆಳೆಯುತ್ತೇವೆ ಎಂದರು.

ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, 2013ರಲ್ಲಿ ಕಸ್ತೂರಿರಂಗನ್ ವರದಿ ವಿರುದ್ಧ ಈ ಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಸರಕಾರಗಳು ಬದ ಲಾದರೂ ಕೂಡ ಅಂದಿನಿಂದ ಇಂದಿನವರೆಗೂ ಯಾವುದೇ ಬದಲಾವಣೆ ಗಳೂ ಆಗಿಲ್ಲ. ಕೇರಳದಲ್ಲಿ ಒಂದು ಹಂತದಲ್ಲಿ ಸರಿಯಾದ ಸಮಸ್ಯೆ ನಮ್ಮ ರಾಜ್ಯದಲ್ಲಿ ಸರಿಯಾಗಿಲ್ಲ. ಅರಣ್ಯ ಭೂಮಿ, ಕೃಷಿಭೂಮಿ, ಜನವಸತಿ ಪ್ರದೇಶಗಳ ಗುರುತಿಸುವಿಕೆ ಸರ್ವೇ ಸಮರ್ಪಕವಾಗಿ ನಡೆದಿಲ್ಲ ಎಂದು ದೂರಿದರು.

ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಫಾ.ಸಲೀಂ ಜೋಸೇಫ್ ವರದಿ ಕುರಿತು ಮಾಹಿತಿ ನೀಡಿದರು. ಉಡುಪಿ ಜಿಲ್ಲಾ ರೈತಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ಹೋರಾಟಗಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಮಾತನಾಡಿ ದರು. ಬೆಳ್ವೆ ಗ್ರಾ.ಪಂ ಅಧ್ಯಕ್ಷೆ ರಾಧಾ, ಬೆಳ್ವೆ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಜಿಲ್ಲಾ ರೈತಸಂಘದ ವಂಡ್ಸೆ ವಲಯದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು ಉಪಸ್ಥಿತರಿದ್ದರು. ಪ್ರವೀಣ್ ಸ್ವಾಗತಿಸಿ ದರು. ಸುದರ್ಶನ್ ಮತ್ತು ಸಂತೋಷ್ ನಿರೂಪಿಸಿದರು. ಪ್ರಶಾಂತ್ ವಂದಿಸಿದರು.

ಗ್ರಾಪಂ ಸದಸ್ಯರಿಂದ ಚುನಾವಣಾ ಬಹಿಷ್ಕಾರ

ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಬೆಳ್ವೆ ಗ್ರಾಮ ಪಂಚಾಯತ್‌ನ 18 ಮಂದಿ ಸದಸ್ಯರು ಈ ಬಾರಿಯ ವಿಧಾನ ಪರಿಷತ್ ಉಪಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಯಾವುದೇ ಕಾರಣಕ್ಕೂ ವರದಿ ಅನುಷ್ಠಾನ ಮಾಡಬಾರದು. ಬೆಳ್ವೆ ಗ್ರಾಮ ವನ್ನು ಈ ವರದಿಯಿಂದ ಕೈಬಿಡಬೇಕು ಎಂದು ಸದಸ್ಯರು ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News