ವಿದ್ಯಾಪೋಷಕ್ನಿಂದ ನಿರ್ಮಿಸಿದ ನೂತನ ಮನೆ ಹಸ್ತಾಂತರ
ಉಡುಪಿ: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿ ಗಳಾದ ಪ್ರಥಮ ಪಿಯುಸಿಯ ಶ್ರೀನಿಧಿ ಹಾಗೂ ಪ್ರಥಮ ಬಿಇಯ ಭೂಮಿಕಾ ಸಹೋದರಿಯರಿಗೆ ಬ್ರಹ್ಮಾವರ ತಾಲೂಕಿನ ಹೇರಾಡಿಯ ಸಂಕಾಡಿಯಲ್ಲಿ ಪಣಂಬೂರು ವಾಸುದೇವ ಐತಾಳ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ‘ಕೃಪಾರಂಗ’ ಇದರ ಉದ್ಘಾಟನೆ ಶನಿವಾರ ನಡೆಯಿತು.
ಪಣಂಬೂರು ವಾಸುದೇವ ಐತಾಳ್ ಹಾಗೂ ಮೀನಾಕ್ಷಿ ವಿ.ಐತಾಳ ದಂಪತಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಕ್ಷಗಾನ ಕಲಾರಂಗದ ಕಾರ್ಯಕರ್ತರ ಸಮಾಜಪರ ಕೆಲಸ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ನಿವೃತ್ತ ಪ್ರಾಂಶುಪಾಲೆ ತಾರಾ, ಉಪನ್ಯಾಸಕಿ ಅನುರಾಧ, ನಿವೃತ್ತ ಬ್ಯಾಂಕ್ ಉದ್ಯೋಗಿ ನರಸಿಂಹ ಮೂರ್ತಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಯಶ್ರೀ, ಸಂಸ್ಥೆಯ ಕಾರ್ಯಕರ್ತರಾದ ಬಿ.ಭುವನ ಪ್ರಸಾದ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ಅನಂತರಾಜ್ ಉಪಾಧ್ಯಾಯ, ಎ.ಅಜಿತ್ ಕುಮಾರ್, ಡಾ. ಪೃಥ್ವಿರಾಜ್ ಕವತ್ತಾರ್, ಡಾ.ರಾಜೇಶ ನಾವಡ, ಗಣಪತಿ ಭಟ್, ವಿನೋದಾ ಎಂ.ಕಡೆಕಾರ್, ವಿಶ್ವನಾಥ ಹಾಗೂ ವಿದ್ಯಾ ಪೋಷಕ್ ವಿದ್ಯಾರ್ಥಿಗಳಾದ ಸುಶ್ಮಾ, ಕಲ್ಪಶ್ರೀ, ಚೆನ್ನಬಸವ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗ ಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು.
ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಭಗ್ನಗೊಂಡ ಮನೆಯನ್ನು 6 ಲಕ್ಷ ರೂ. ವೆಚ್ಚದಲ್ಲಿ, ಕೇವಲ 80ದಿನಗಳಲ್ಲಿ ನಿರ್ಮಿಸಿ ಹಸ್ತಾಂತರಿಸಲಾಯಿತು. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 55 ನೆಯ ಮನೆಯಾಗಿದೆ.