ಶ್ರಿಮಧ್ವಾಚಾರ್ಯರ ಜಯಂತ್ಯುತ್ಸ ಆಚರಣೆ
ಉಡುಪಿ, ಅ.13: ದ್ವೈತ ಮತ ಪ್ರತಿಪಾದಕ, ಉಡುಪಿ ಶ್ರೀಕೃಷ್ಣ ಪ್ರತಿಷ್ಠಾಪಕ ಜಗದ್ಗುರು ಶ್ರಿಮಧ್ವಾಚಾರ್ಯರ ಜಯಂತ್ಯುತ್ಸವವನ್ನು ವಿಜಯದಶಮಿ ಪರ್ವ ಕಾಲದಲ್ಲಿ ರವಿವಾರ ಆಚರಿಸಲಾಯಿತು.
ಉಡುಪಿಯಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಉಡುಪಿಯಲ್ಲಿ ಮಧ್ವ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು. ಶ್ರೀಅನಂತೇಶ್ವರ ದೇವಸ್ಥಾನದ ಆಚಾರ್ಯ ಮಧ್ವ ಸನ್ನಿಧಿ ಯಲ್ಲಿ ತ್ರಿಶತ ಶ್ರೀವಾಯುಸ್ತುತಿ ಪಾರಾಯಣ ಹಾಗೂ ಪುಷ್ಪಾರ್ಚನೆ ನಡೆಯಿತು. ಪುತ್ತಿಗೆ ಉಭಯ ಸ್ವಾಮೀಜಿ ವಿಶೇಷ ಪೂಜೆ ನಡೆಸಿದರು.
ಸಂಜೆ ರಥಬೀದಿಯಲ್ಲಿ ಆಚಾರ್ಯ ಮಧ್ವರ ಭಾವಚಿತ್ರ ಹಾಗೂ ಗ್ರಂಥಗಳ ರಥೋತ್ಸವ ನಡೆಯಿತು. ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಆಚಾರ್ಯ ಮಧ್ವರ ಕುರಿತು ಉಪನ್ಯಾಸ ನೀಡಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಪಣಿಯಾಡಿ ಶ್ರೀಲಕ್ಷ್ಮೀ ಅನಂತಾಸನ ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆದ ಶ್ರೀಮಧ್ವ ಜಯಂತಿ ಕಾರ್ಯಕ್ರಮದಲ್ಲಿ ವೇದವ್ಯಾಸ ಐತಾಳರ ನೇತೃತ್ವದಲ್ಲಿ ಋತ್ವಿಜರಿಂದ ಶ್ರೀವಾಯುಸ್ತುತಿ ಹೋಮ, ವಿಶೇಷ ಪೂಜೆ ನಡೆಯಿತು. ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರಿಂದ ಆಚಾರ್ಯ ಮಧ್ವರ ತತ್ವ ಚಿಂತನೆ ನಡೆಯಿತು. ಪಾಡಿಗಾರು ಪುತ್ತಿಗೆ ಮಠ, ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲೂ ಮಧ್ವ ಜಯಂತಿ ಆಚರಿಸಲಾಯಿತು. ಆಸ್ಟ್ರೇಲಿಯಾದ ಪುತ್ತಿಗೆ ಶಾಖಾ ಮಠದಲ್ಲಿ ಮಧ್ವ ಜಯಂತಿ ಸಡಗರದಿಂದ ಆಚರಿಸಲಾಯಿತು.