ಉಡುಪಿ: ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ನ ಪದಗ್ರಹಣ

Update: 2023-11-21 14:39 GMT

ಉಡುಪಿ, ನ.21: ಉಡುಪಿ ಜಿಲ್ಲಾ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಇಂಟೆಕ್) ಸಮಿತಿಯ ಪದಗ್ರಹಣ ಕಾರ್ಯಕ್ರಮ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂಟಕ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಮಲ್ಲಿ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಪದಗ್ರಹಣ ನೆರವೇರಿಸಿದ ರಾಕೇಶ್ ಮಲ್ಲಿ ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಎಲ್ಲಾ ಬೂತುಗಳಲ್ಲೂ ಸಮಿತಿಗಳನ್ನು ರಚಿಸಿ ಸಂಘಟನೆಯನ್ನು ಬಲಾಢ್ಯಗೊಳಿಸಬೇಕು. ಇದರಿಂದ ಜಿಲ್ಲೆಯ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಅನುಕೂಲ ವಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಜಿಲ್ಲಾ ಇಂಟಕ್ ಸಮಿತಿಯ ರಚನೆಯೊಂದಿಗೆ ಸಂಘಟನೆಯು ಮುಂದಿನ ದಿನಗಳಲ್ಲಿ ಬಲಾಢ್ಯಗೊಂಡು ಕಾರ್ಮಿಕರ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸುವಂತಾಗಲಿ ಎಂದು ಹಾರೈಸಿದರು.

ಜಿಲ್ಲಾ ಇಂಟಕ್ ಘಟಕ ಅಧ್ಯಕ್ಷ ಕಿರಣ್ ಹೆಗ್ಡೆ ಮಾತನಾಡಿ, ಈಗಾಗಲೇ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ 10 ಬ್ಲಾಕ್‌ಗಳಲ್ಲೂ ಸಮಿತಿಗಳನ್ನು ರಚಿಸಲಾಗಿದೆ. ಕಾರ್ಮಿಕರನ್ನು ಒಗ್ಗೂಡಿಸಿಕೊಂಡು ಅವರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಂಘಟನೆ ತೊಡಗಿಸಿಕೊಳ್ಳುತ್ತದೆ ಎಂದರು.

ಸಮಾರಂಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪಕ್ಷದ ಮುಖಂಡರಾದ ಸುಧೀರ್‌ಕುಮಾರ್‌ಮುರೋಳಿ, ಪ್ರಸಾದ್‌ ರಾಜ್ ಕಾಂಚನ್, ನೀರೇ ಕೃಷ್ಣಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ನವೀನ್ ಶೆಟ್ಟಿ, ಸತೀಶ್ ಸರ್ವೇಗಾರ್, ಚಂದ್ರ ಪೂಜಾರಿ ಕೋಟ, ಚಂದ್ರಅಮೀನ್ ಕುಂದಾಪುರ, ಸುಜಿತ್ ಜಾನ್, ವಾಸುದೇವ ಪೈ, ದಿವಾಕರ ನಿಟ್ಟೆ, ಸುಮನ್ ಬೋಳಾರ್, ಉಮೇಶ್ ಕಾಂಚನ್, ರಾಘವೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.

ರಫೀಕ್ ಅಹ್ಮದ್ ಸ್ವಾಗತಿಸಿ, ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News