ಭಟ್ಕಳ ಸರ್ಕಾರಿ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಉಮೇಶ್ ನಾಪತ್ತೆ: ದೂರು ದಾಖಲು

Update: 2023-10-14 16:10 GMT

ಭಟ್ಕಳ: ಭಟ್ಕಳ ಸರ್ಕಾರಿ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಎಚ್.ಟಿ.ಉಮೇಶ್ ನಾಲ್ಕು ದಿನಗಳಿಂದ ಕಾಣೆಯಾಗಿದ್ದು ಈ ಕುರಿತಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅ.10 ರಂದು ಕರ್ತವ್ಯಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಗೆ ಹೋದ ಇವರು ಇತ್ತ ಆಸ್ಪತ್ರೆಗೂ ಬಾರದೆ, ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳೀ ನಿಟ್ಟೂರು ನಿವಾಸಿಯಾಗಿರುವ ಇವರು ಭಟ್ಕಳದ ಡಿ.ಪಿ. ಕಾಲೋನಿಯಲ್ಲಿ ವಾಸವಾಗಿದ್ದರು.

ನಾಲ್ಕು ತಿಂಗಳ ಹಿಂದಷ್ಟೆ ಡಾ. ಪೂಜಾ ಎನ್ನುವವರೊಂದಿಗೆ ವಿವಾಹ ಆಗಿದ್ದ ಇವರು ಪತ್ನಿಯೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ತನ್ನ ಪತಿ ನಾಪತ್ತೆಯಾಗಿರುವ ಕುರಿತು ಆತಂಕಗೊಂಡಿರುವ ಡಾ. ಪೂಜಾ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಭಟ್ಕಳ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಭಟ್ಕಳ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡುತ್ತಿದ್ದ ಡಾ. ಉಮೇಶ್ ಕಾಣೆಯಾಗಿರುವ ಕುರಿತಂತೆ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಉತ್ತಮ ರೀತಿಯಲ್ಲಿ ಉಪಚರಿಸುತ್ತಿದ್ದ ಉಮೇಶರು ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಕೌಟುಂಬಿಕ ಜೀವನದ ಕುರಿತು ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಉತ್ತಮ ವ್ಯಕ್ತಿಯಾಗಿದ್ದರು. ಇವರು ಕಾಣೆಯಾಗುವುದರ ಹಿಂದೆ ಯಾವ ಕಾರಣ ಇದೆ ಎಂಬುದು ಗೊತ್ತಿಲ್ಲ. ಪೊಲೀಸರ ತನಿಖೆಯಿಂದಷ್ಟೆ ಮಾಹಿತಿ ದೊರೆಯಬಹುದಾಗಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News