ಭಟ್ಕಳ: ಫೈನಾನ್ಸ್ ಹಣ ದುರ್ಬಳಕೆ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

Update: 2024-06-23 05:59 GMT

ಭಟ್ಕಳ:  ಶ್ರೀರಾಮ್ ಫೈನಾನ್ಸ್ ನಲ್ಲಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಕುಂದಾಪುರದ ರಾಘವೇಂದ್ರ ರಾಜೀವ ಸ್ವಾಮಿ ಎಂದು ಗುರುತಿಸಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಾಗೂ ಮೂರನೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಪ್ರಕರಣದ ಹಿನ್ನೆಲೆ:

ಆರೋಪಿ ರಾಘವೇಂದ್ರ ರಾಜೀವ ಸ್ವಾಮಿಯು  ಭಟ್ಕಳ ಶ್ರೀ ರಾಮ ಫೈನಾನ್ಸ್ ಶಾಖೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ (ಜನವರಿ 1 ,2023 ರಿಂದ ಮೇ, 2 2024 ವೇಳೆ) ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಫೈನಾನ್ಸಿನಲ್ಲಿ ಸಾಲ ಪಡೆದ ಕೆಲವು ಸಾಲಗಾರರಿಗೆ ಸಂಬಂಧಿಸಿದ ವಾಹನಗಳ ಸಾಲವನ್ನು ಪೂರ್ತಿಯಾಗಿ ಚುಕ್ತಾಗೊಳಿಸಿದ್ದರು.

ಕಂಪೆನಿಯ ಹೈಪೋತಿಕೇಶನ್ ಸರ್ಟಿಫಿಕೇಟನ್ನು ತಯಾರಿಸಿ ಕಂಪನಿಯ ಸೀಲ್ ಬಳಸಿ ಅದಕ್ಕೆ ಮುಖ್ಯ ಕಚೇರಿಯಿಂದ ಸಹಿ ಪಡೆಯದೆ ಅವರೇ ಅದಕ್ಕೆ ನಕಲಿ ಸಹಿ ಮಾಡಿ ಆರ್.ಟಿ. ಓ ದಲ್ಲಿ ನೀಡಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಲು ಅನುಕೂಲ ಮಾಡಿಕೊಟ್ಟು ಕಂಪನಿಗೆ ಹಾಗೂ ಗ್ರಾಹಕರಿಗೆ ಮೋಸ ಮಾಡಿದ್ದಾರೆ.

ಕಂಪನಿಯಿಂದ ಪಡೆದ ಸಾಲ ಮರುಪಾವತಿ ಮಾಡದೇ ಇರುವ ಗ್ರಾಹಕರ ವಾಹನಗಳನ್ನು ಶ್ರೀರಾಮ ಫೈನಾನ್ಸನ ಮೇಲಾಧಿಕಾರಿಗಳ ಅನುಮೋದನೆಯನ್ನು ಪಡೆಯದೇ ತಮ್ಮ ವಶಕ್ಕೆ ಪಡೆದು, ವಾಹನಗಳನ್ನು ಕಂಪನಿಯ ನಿಯಮಾವಳಿಗಳನ್ನು ಪಾಲಿಸದೇ ಮಾರಾಟ ಮಾಡಿ ಬಂದ ಹಣವನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡು ಕಂಪನಿಗೆ ಹಾಗೂ ಗ್ರಾಹಕರಿಗೆ ಮೋಸ, ವಂಚನೆ, ನಂಬಿಕೆ ದ್ರೋಹವನ್ನು ಎಸಗಿದ್ದಾರೆ.

ಆರೋಪಿಯು ಕಳೆದ ಕೆಲವು ತಿಂಗಳುಗಳಿಂದ ಲೋನ್ ಸೆಟ್ಲ್ ಮೆಂಟ್ ಮಾಡುತ್ತೇವೆ ಎಂದು ಗ್ರಾಹಕರಿಂದ ಹಣ ಪಡೆದು ಕಂಪನಿಗೆ ಪಾವತಿಸದೇ, ಸಾಲದ ಕಂತುಗಳನ್ನು ಸಾಲದ ಖಾತೆಗೂ ಜಮಾ ಮಾಡದೇ ತಮ್ಮ ಸ್ವಂತ ಖರ್ಚಿಗೆ ದುರ್ಬಳಕೆ ಮಾಡಿಕೊಂಡು ಕಂಪನಿಗೆ ವಂಚಿಸಿ, ನಂಬಿಕೆ ದ್ರೋಹ ಮಾಡಿ ಕರ್ತವ್ಯ ಲೋಪ ಎಸಗಿ ಒಟ್ಟೂ 89,79,524 ರೂ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಶ್ರೀರಾಮ್ ಪೈನಾನ್ಸ್ ಜಿ.ಪಿ‌. ಹೋಲ್ಡರ್ ನವೀನ ಪೂಜಾರಿ ದೂರು ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News