"ಲೋಕಸಭೆಯಲ್ಲಿ ಅರಣ್ಯವಾಸಿಗಳ ಪರ ಧ್ವನಿ ಅವಶ್ಯ" ; ರವೀಂದ್ರ ನಾಯ್ಕರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಕಾಗೋಡು ತಿಮ್ಮಪ್ಪ ಸೂಚನೆ

Update: 2024-02-25 10:23 GMT

ಶಿರಸಿ: ಮುಂಬರುವ ಲೋಕಸಭಾ ಚುನಾವಣೆಗೆ, ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಿ, ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಲೋಕಸಭೆಯಲ್ಲಿ ಧ್ವನಿಯಾಗಲು ಪ್ರಯತ್ನಿಸು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಹೇಳಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಇಂದು ಕಾಗೋಡ ತಿಮ್ಮಪ್ಪ ಅವರನ್ನ ಸಾಗರದ ಸ್ವಗೃಹದಲ್ಲಿ ಭೇಟಿಯಾದ ಸಂದರ್ಭದಲ್ಲಿ ಪಕ್ಷದ ಹಿರಿಯರನ್ನ ಸಂಪರ್ಕಿಸಿ, ಈ ದಿಶೆಯಲ್ಲಿ ಕಾರ್ಯ ಮುಂದುವರೆಸು ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ಅರಣ್ಯ ಹಕ್ಕು ಕಾಯಿದೆ ಜ್ಯಾರಿಗೆ ತಂದು ೧೮ ವರ್ಷಗಳಾದರೂ, ಅರಣ್ಯ ಭೂಮಿ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಇಂದಿಗೂ ಸ್ಪಷ್ಟತೆ ದೊರಕದೇ ಇರುವುದು ವಿಷಾದಕರ. ಕಾನೂನು ಅನುಷ್ಠಾನದಲ್ಲಿ ಇಂದಿನ ಸಂಸದರಲ್ಲಿ ಬದ್ಧತೆ ಇಲ್ಲದಿರುವುದು ಮತ್ತು ಕಾನೂನಿನ ಜ್ಞಾನದ ಕೊರತೆಯೇ ಇದಕ್ಕೆ ಕಾರಣ ಎಂದು ಅವರು ವಿಶ್ಲೆಷಿಸಿದರು.

ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು, ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿರುವುದು ದುರಾದೃಷ್ಟಕರ. ಅರಣ್ಯವಾಸಿಗಳ ಪರವಾಗಿ ದೀರ್ಘ ೩೩ ವರ್ಷ ಹೋರಾಟಗಾರರ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಅವರು ಪ್ರಶಂಸಿಸಿದರು.

ಸಂಸದರ ಮೌನ:

ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ, ಈ ಭಾಗದಿಂದ ಆರಿಸಿ ಹೋದಂತಹ ಲೋಕಸಭಾ ಸದಸ್ಯರು ಮೌನವಾಗಿರುವುದು ಖೇದಕರ. ಈ ನ್ಯೂನತೆ ಸರಿದೂಗಿಸುವಲ್ಲಿ ರಾಜಕೀಯ ಪ್ರಯತ್ನ ಮುಂದುವರೆಯಲಿ ಎಂದು ಕಾಗೋಡ ತಿಮ್ಮಪ್ಪ ಅವರು ಸೂಚನೆ ನೀಡಿದರೆಂದು ರವಿಂದ್ರ ನಾಯ್ಕ ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News