ಭಟ್ಕಳ ವಲಯ ಅರಣ್ಯಾಧಿಕಾರಿಗೆ ಜೀವ ಬೆದರಿಕೆ: ಪ್ರಕರಣ ದಾಖಲು

Update: 2023-09-24 16:57 GMT

ಭಟ್ಕಳ: ಭಟ್ಕಳ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಶರತ್‌ ಶೆಟ್ಟಿಗೆ ಅನಾಮಿಕ ವ್ಯಕ್ತಿಯೋರ್ವರು ವಾಟ್ಸಪ್‌ನಲ್ಲಿ ಜೀವ ಬೆದರಿಕೆಯ ಸಂದೇಶಗಳನ್ನು ರವಾನಿಸಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.19ರ ರಾತ್ರಿ ಆರ್‌ಎಫ್‌ಓ ಶರತ್ ಶೆಟ್ಟಿ +1(334)581-4044 ನಂಬರಿನಿಂದ ಆರ್‌ಎಫ್‌ಓ ಶರತ್ ಶೆಟ್ಟಿಯವರ ವಾಟ್ಸಪ್ ನಂಬರಿಗೆ ವೈಯಕ್ತಿಕ ಜೀವನ, ಸಾರ್ವಜನಿಕರೊಂದಿಗಿನ ಸಂಬಂಧ ಮತ್ತು ವೃತ್ತಿ ಜೀವನವನ್ನು ಹಾಳು ಮಾಡುತ್ತೇವೆ ಎಂದು ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ. ತಾನು ಕಳೆದ 5 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಭಟ್ಕಳದಲ್ಲಿ ಆರ್‌ಎಫ್‌ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಹಲವಾರು ಅತಿಕ್ರಮಣ ಖುಲ್ಲಾ ಪಡಿಸಲಾಗಿದೆ. ಅಲ್ಲದೇ ಹಗಲು ರಾತ್ರಿ ಎನ್ನದೇ ಅರಣ್ಯದಲ್ಲಿ ನಡೆಯುತ್ತಿದ್ದ ಹಲವಾರು ಅಕ್ರಮಗಳನ್ನು ತಡೆದು ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಸದರಿ ಶಿಕ್ಷೆಗಳಿಗೆ ಒಳಪಟ್ಟವರ ಪೈಕಿ ಯಾರೋ ತನ್ನ ಆತ್ಮಸ್ಥೆರ್ಯ ಕುಗ್ಗಿಸಲು ಈ ರೀತಿ ಮಾಡಿರಬಹುದು. ಈ ಸಂದೇಶಗಳಿಂದ ತಾನು ಮಾನಸಿಕವಾಗಿ ನೊಂದಿರುವುದಾಗಿ ಶರತ್‌ ಶೆಟ್ಟಿ ತಾವು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News