ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ಇಫ್ತಾರ್ ಕಾರ್ಯಕ್ರಮ

ಭಟ್ಕಳ: ರಮಝಾನ್ ತಿಂಗಳ ಮಹತ್ವವನ್ನು ಪ್ರತಿಪಾದಿಸುವ ಉದ್ದೇಶದಿಂದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ಭಟ್ಕಳ ಶಾಖೆಯ ವತಿಯಿಂದ ವಿಶೇಷ ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭ ಮಾತಾನಾಡಿದ ಭಟ್ಕಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಉಪವಾಸವು ಬಡವ-ಶ್ರೀಮಂತ ಎಂಬ ಭೇದವನ್ನು ನಿವಾರಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು. "ಶ್ರೀಮಂತರಿಗೂ ಹಸಿವಿನ ಸಂಕಟ ಅರಿವಾಗಲು ಈ ತಿಂಗಳು ಒಂದು ಉಪಯುಕ್ತ ಅವ ಕಾಶ. ಭಟ್ಜಳದಲ್ಲಿ ಅಂಗಡಿ ಮಾಲಕರು ಮತ್ತು ನೌಕರರು ಸಹಭಾಗಿಯಾಗಿ ಉಪವಾಸವೃತ ಪಾಲಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ್ ನಾಯ್ಕ ಅವರು, "ರಮಝಾನ್ ತಿಂಗಳು ಶಾಂತಿ, ಪ್ರೀತಿ ಮತ್ತು ಏಕತೆಯ ಸಂದೇಶವನ್ನು ಸಾರುತ್ತದೆ. ಉಪವಾಸವೃತದಿಂದ ಮನುಷ್ಯನಲ್ಲಿ ಶಿಸ್ತು ಮತ್ತು ಆತ್ಮನಿಯಂತ್ರಣ ಬೆಳೆಯುತ್ತದೆ" ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಇಫ್ತಾರ್ ಸಂದೇಶ ನೀಡಿದ ಐಟಾ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಅವರು, "ಅಂತರಂಗಶುದ್ಧಿ ಮತ್ತು ಆತ್ಮನಿಯಂತ್ರಣ ಮಾನವನಿಗೆ ಅತ್ಯಗತ್ಯ. ಉಪವಾಸದ ಮೂಲಕ ನಾವು ಇದನ್ನು ಸಾಧಿಸಬಹುದು. ಪವಿತ್ರ ಕುರ್ಆನ್ ಅವತೀರ್ಣಗೊಂಡ ತಿಂಗಳು ರಮಝಾನ್ ಆಗಿದ್ದು ಇದು ಅತ್ಯಂತ ಸರಳ ಭಾಷೆಯಲ್ಲಿದೆ. ಇದನ್ನು ಸಾಮಾನ್ಯ ವ್ಯಕ್ತಿಯೂ ಸಹ ಅರ್ಥೈಸಿಕೊಳ್ಳಬಹುದಾಗಿದೆ. ಇದು ಕೇವಲ ಮುಸ್ಲಿಮರ ಗ್ರಂಥವಲ್ಲ ಎಂದು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನಾ ಎಸ್.ಎಂ. ಸೈಯದ್ಯ ಝುಬೇರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಐಟಾ ಭಟ್ಕಳ ಶಾಖೆಯ ಅಧ್ಯಕ್ಷ ಸಾದಿಕ್ ಅಹಮದ್, ಉಪಾಧ್ಯಕ್ಷ ಮುತಾಹಿರ್ ಶೇಖ್, ಕಾರ್ಯದರ್ಶಿ ಮುಷ್ತಾಖ್ ಅಹಮದ್ ಸೈಯ್ಯದ್ ಮತ್ತು ಮಹಿಳಾ ವಿಭಾಗದ ಸಂಚಾಲಕಿ ಸಿ.ಆರ್.ಪಿ. ಮುನಿರಾ ಖಾನಂ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕರಿಗೆ ಶಾಲು ಹೊದಿಸಿ ಗೌರವಿಸಿದರು.
ಸಭೆಯಲ್ಲಿ ಸದ್ಭಾವನ ಮಂಚ್ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ, ಅಂಜುಮನ್ ಪದವಿ ಮಹಾ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ.ಆರ್.ಎಸ್.ನಾಯಕ, ಹಿರಿಯ ಮುಖಂಡ ರಾಮಾ ಮೊಗೇರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ರವೂಫ್ ಸವಣೂರು ಸ್ವಾಗತಿಸಿದರು, ಜಿಲ್ಲಾಧ್ಯಕ್ಷ ಅಲಿ ಮನಿಗಾರ್ ಧನ್ಯವಾದ ಅರ್ಪಿಸಿದರು.
