ವಿಜಯಪುರ | ಪಾದಚಾರಿಗಳಿಗೆ ಬೈಕ್ ಢಿಕ್ಕಿ: ನಾಲ್ವರು ಮೃತ್ಯು, ಮೂವರಿಗೆ ಗಂಭೀರ ಗಾಯ

Update: 2024-09-06 04:26 GMT

ವಿಜಯಪುರ : ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ದಾರುಣ ಘಟನೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹೊರ ವಲಯದ ಪಿಕೆಪಿಎಸ್ ಬಳಿ ಗುರುವಾರ ರಾತ್ರಿ 11.10ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೈಕ್ ಚಾಲಕ ತಾಳಿಕೋಟೆ ತಾಲೂಕಿನ ಗೊಟಗುಣಕಿ ನಿವಾಸಿ ನಿಂಗರಾಜ ಚೌಡಕಿ(22), ಸಹ ಸವಾರ ದೇವರಹಿಪ್ಪರಗಿ ತಾಲೂಕು ಹಂಚಲಿ ನಿವಾಸಿ ಅನೀಲ ಎಂ. ಖೈನೂರ(23), ರಸ್ತೆ ದಾಟುತ್ತಿದ್ದ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ನಿವಾಸಿ ಕುಮಾರ ಪ್ಯಾಟಿ(18) ಹಾಗೂ ರಾಯಪ್ಪ ಮಹಾಂತಪ್ಪ ಬಾಗೇವಾಡಿ(24) ಎಂಬವರು ಮೃತಪಟ್ಟವರಾಗಿದ್ದಾರೆ. ಈ ಪೈಕಿ ಗಂಭೀರ ಗಾಯಗೊಂಡಿದ್ದ ರಾಯಪ್ಪ ಮಹಾಂತಪ್ಪ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದವರು ಅಪಘಾತ ಸ್ಥಳದಲ್ಲೇ ಮೃತಪಟ್ಟಿರುವುದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.

ಮಲಗಲದಿನ್ನಿಯ ಶಾಹಿದ ಹುನಗುಂದ(19), ಪ್ರಶಾಂತ ಎಚ್. ಕುರುಬಗೌಡರ(16) ಮತ್ತು ಹನಮಂತ ಕುರುಬಗೌಡರ(18) ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕುಂಟೋಜಿ ಜಾತ್ರೆ ನಡೆಯುತ್ತಿದ್ದು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಏಳು ಮಂದಿ ರಸ್ತೆ ಬದಿ ವಾಹನ ನಿಲ್ಲಿಸಿ, ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ವೇಳೆ ಅತಿ ವೇಗದಿಂದ ಬಂದ ಬೈಕ್ ರಸ್ತೆ ದಾಟುತ್ತಿದ್ದವರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News