ಬಾಬಾ ಸಾಹೇಬರ ಎಚ್ಚರಿಕೆಯ ಮಾತುಗಳು ನಿಜವಾಗುವ ಕಾಲಘಟ್ಟದಲ್ಲಿ...

Update: 2023-11-26 07:42 GMT

ಈಗಿರುವ ದೇಶದ ಸಂವಿಧಾನವನ್ನು ದುರ್ಬಲ ಮತ್ತು ಅರ್ಥಹೀನಗೊಳಿಸದ ಹೊರತು, ಪ್ರಾಚೀನ ಸನಾತನಿ ಆಡಳಿತದ ಮಾದರಿ ಪುನಃಸ್ಥಾಪಿಸುವುದು ಕಷ್ಟದ ಕೆಲಸವೆಂದು ಪುರೋಹಿತಶಾಹಿಗಳಿಗೆ ತಿಳಿದಿದೆ. ಆ ಕಾರಣದಿಂದಲೇ ಅವರು ಈಗ ಸಂವಿಧಾನವನ್ನು ದುರ್ಬಲಗೊಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ.

ಈ ದೇಶದ ಅಸ್ಪಶ್ಯ ದಲಿತ-ದಮನಿತ ಸಮುದಾಯಗಳ ಸಬಲೀಕರಣ ಮಾಡುವ ಎಲ್ಲ ಬಗೆಯ ಪ್ರಯತ್ನಗಳು ಯಶಸ್ವಿಯಾದರೆ ಇಲ್ಲಿ ಬಲವಾಗಿ ಬೇರೂರಿರುವ ಮತ್ತು ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ವಿಷಮಗೊಳಿಸಿರುವ ಸನಾತನಿ ಆರ್ಯ ಪ್ರಣೀತ ಬ್ರಾಹ್ಮಣ್ಯದ ಗೋಡೆ ಶಿಥಿಲಗೊಳ್ಳುತ್ತದೆ. ದಲಿತ ಸಬಲೀಕರಣದೊಂದಿಗೆ ಶೂದ್ರ ಮತ್ತು ಅತಿ ಶೂದ್ರರ ಸಬಲೀಕರಣದ ಪ್ರಯತ್ನ ಒಟ್ಟುಗೂಡಿದರಂತೂ ಸಹಜವಾಗಿ, ಇದು ಬ್ರಾಹ್ಮಣ್ಯದ ಆರಂಭಿಕ ಅಂತ್ಯಕ್ಕೆ ಮಾರಕ ಸಂಯೋಜನೆಯಾಗಬಲ್ಲದು. ಅಸ್ಪಶ್ಯರು ಈ ದೇಶದ ಬಹುಮುಖ್ಯ ಕಾಲ್ದಳವಾಗಿ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಡಿಪಾಯ ಮತ್ತು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದರೂ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಅವರನ್ನು ಭಾರತೀಯ ಸಮಾಜ ಅನೇಕ ವಿಧಗಳಲ್ಲಿ ಉಚಿತ ಬಂಧಿತ ಕಾರ್ಮಿಕರಾಗಿ ದುರುಪಯೋಗ ಮಾಡಿಸಿಕೊಳ್ಳುತ್ತಿದೆ. ಸಂವಿಧಾನ ಜಾರಿಯಾಗಿ ಅರ್ಧ ಶತಮಾನವೇ ಕಳೆದುಹೋಗಿದ್ದರೂ ಭಾರತೀಯ ಮೇಲ್ವರ್ಗದ ಮನಸ್ಸಿನಲ್ಲಿರುವ ದಲಿತ ದ್ವೇಷಿ ಮತ್ತು ಬ್ರಾಹ್ಮಣ್ಯದ ಕೊಳಕು ಚಿಂತನೆಗಳು ಕೊಂಚವೂ ಕಡಿಮೆಯಾಗಿಲ್ಲ.

ಭಾರತದ ನಗರಗಳ ಆರೋಗ್ಯ ಮತ್ತು ಸ್ವಚ್ಛತೆಯನ್ನು ಅಸ್ಪಶ್ಯರ ಅಪಾರ ಶ್ರಮ ಮತ್ತು ದುಡಿಮೆ ಇಲ್ಲದೆ ಊಹಿಸಿಕೊಳ್ಳುವುದು ಅಸಾಧ್ಯವಾದ ಮಾತು. ಅದರಂತೆ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಿರುವ ಸಣ್ಣ, ಅತಿ ಸಣ್ಣ ಗುಡಿ ಕೈಗಾರಿಕೆಗಳು, ಚರ್ಮೋದ್ಯಮ ಮುಂತಾದ ಶ್ರಮದಾಯಕ ವೃತ್ತಿಗಳು ಮೇಲ್ವರ್ಗ ಪ್ರತಿನಿಧಿಸುವ ಕೌಶಲ್ಯ ಆಧಾರಿತ ಬಿಳಿ ಕಾಲರ್ ಸಾಫ್ಟ್ವೇರ್ ದಂಧೆಗಿಂತ ದೇಶದ ರಫ್ತು ವಲಯವನ್ನು ಸಬಲಗೊಳಿಸಿವೆ. ಕೃಷಿ ಕ್ಷೇತ್ರದಲ್ಲೂ ದಲಿತರ ದುಡಿಮೆ ಅಪಾರವಾದದ್ದು. ಆದರೂ ಅವರ ಶ್ರಮವು ಅತಿ ಅಗ್ಗದ ದುಡಿಮೆಯಾಗಿ ನಮ್ಮ ಸಮಾಜ ಪರಿಗಣಿಸುತ್ತಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಸ್ಪಶ್ಯರಿಗೆ ಸಾಮಾಜಿಕ ನ್ಯಾಯ ನೀಡುವ ಮೀಸಲಾತಿ ಪ್ರಾತಿನಿಧ್ಯಕ್ಕಾಗಿ ಹೋರಾಡುತ್ತಿದ್ದರೆ ಪರಾವಲಂಬಿ ಪುರೋಹಿತಶಾಹಿಗಳು ಅದನ್ನು ವಿರೋಧಿಸಿದವು. ಆದರೆ ಪ್ರಗತಿಪರರಾಗಿದ್ದ ಬ್ರಿಟಿಷರು ದಲಿತರಿಗೆ ರಾಜಕೀಯದಲ್ಲಿ ಮೀಸಲಾತಿ ನೀಡುವಲ್ಲಿ ಯಶಸ್ವಿಯಾದರು. ಪುರೋಹಿತಶಾಹಿಗಳು ಈಗ ಮೀಸಲಾತಿಯನ್ನು ಮುಗಿಸಿ ಹಾಕಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿವೆ.

ಮೀಸಲಾತಿ ಜಾರಿಯಾಗದಂತೆ ಪುರೋಹಿತರು ಮಾಡುತ್ತಿದ್ದ ಕುಟಿಲ ಹುನ್ನಾರವನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶತಾಯಗತಾಯ ವಿರೋಧಿಸಿ ವಿಫಲಗೊಳಿಸಿದರು. ಈಗಲೂ ದಲಿತರಿಗೆ ನೀಡಲಾದ ಮೀಸಲಾತಿಯನ್ನು ತೆಗೆದು ಹಾಕಲು ಪುರೋಹಿತಶಾಹಿ ಪಟ್ಟಭದ್ರರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅದನ್ನು ರಾಜಕೀಯವಾಗಿ ಮುಗಿಸಿ ಹಾಕುವುದು ಕಷ್ಟದಾಯಕವಾಗಿ ಪರಿಣಮಿಸಿದೆ. ಆದ್ದರಿಂದಲೇ ಈ ದುಷ್ಟಶಕ್ತಿಗಳು ಅದನ್ನು ಕಾರ್ಯಾಂಗ ಮತ್ತು ನ್ಯಾಯಾಂಗ ವಿಧಾನಗಳ ಮೂಲಕ ಮುಗಿಸಲು ಪ್ರಯತ್ನಿಸುತ್ತಿವೆ. ಮೀಸಲಾತಿಯನ್ನು ಶಾಸನಬದ್ಧವಾಗಿ ಮುಗಿಸಿ ಹಾಕಿದರೆ ಆಗಬಹುದಾದ ರಾಜಕೀಯ ದುಷ್ಪರಿಣಾಮಗಳಿಗೆ ಹೆದರಿ ಖಾಸಗೀಕರಣದ ಮೂಲಕ ಅದನ್ನು ಪರೋಕ್ಷವಾಗಿ ಮುಗಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಪೂನಾ ಮಾತುಕತೆ ಆಧರಿತ ದ್ವಿಮತದಾನದ ಒಪ್ಪಂದದಿಂದ ಪ್ರಯೋಜನ ಪಡೆದ ನಾಯಕತ್ವದ ಧ್ವನಿಯನ್ನು ಮೌನಗೊಳಿಸುವಲ್ಲಿ ಮೇಲ್ವರ್ಗಕ್ಕೆ ಅದು ಬಹಳ ಉಪಯುಕ್ತವಾಯಿತು.

ಇಲ್ಲದಿದ್ದರೆ ಅಸ್ಪಶ್ಯತೆಯನ್ನು ಪುನಶ್ಚೇತನಗೊಳಿಸಲು ಮತ್ತು ಮೀಸಲಾತಿ ಬೇಡಿಕೆಯನ್ನು ದುರ್ಬಲಗೊಳಿಸಲು ಅವರು ರಾಜಕೀಯ ಮೀಸಲಾತಿಯನ್ನು ತಮ್ಮ ಅನುಕೂಲಕ್ಕೆ ಒಂದು ಸಾಧನವಾಗಿ ಬಳಸುತ್ತಿದ್ದರು. ಮೀಸಲಾತಿಯ ನೈಜ ಫಲಾನುಭವಿಗಳು ತಮಗೆ ಆಗಬಹುದಾದ ಹಾನಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮೊದಲೇ, ಕೆಲವು ಸ್ಪರ್ಶ ದಲಿತರನ್ನು ಯಶಸ್ವಿಯಾಗಿ ಮೀಸಲಾತಿಯ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳಲಾಯಿತು. ಇದೊಂದು ಅತ್ಯಂತ ಪೂರ್ವನಿಯೋಜಿತ ಷಡ್ಯಂತ್ರವೆನ್ನುವುದು ನೈಜ ದಲಿತರಿಗೆ ತಿಳಿಯಲು ಬಹಳ ಸಮಯ ಹಿಡಿಯಿತು. ಈ ಷಡ್ಯಂತ್ರವು ದಲಿತ ಸಬಲೀಕರಣ ಚಳವಳಿಯನ್ನು ದಿಕ್ಕುತಪ್ಪಿಸಿ ನೈಜ ಫಲಾನುಭವಿಗಳಿಗೆ ಅನ್ಯಾಯವನ್ನೆಸಗಿತು. ಆದರೆ ಪುರೋಹಿತಶಾಹಿಗಳು ತಮ್ಮ ವಿದೇಶಿ ಮೂಲದ ಹೊರತಾಗಿಯೂ ಇಂದು ಭಾರತದ ಅಧಿಕಾರ ಸ್ಥಾನವನ್ನು ತಮ್ಮ ಕಪಿಮುಷ್ಟಿಯಲ್ಲಿ ಬಿಗಿದಿಟ್ಟುಕೊಂಡಿದ್ದಾರೆ. ಪುರೋಹಿತಶಾಹಿಗಳು ಮನುಸ್ಮತಿಯನ್ನು ಸಂವಿಧಾನವಾಗಿ ಮಾಡುವ ಮೂಲಕ ಚತುರ್ವರ್ಣ ವ್ಯವಸ್ಥೆ ಆಧಾರಿತ ಆಡಳಿತದ ಪುನಶ್ಚೇತನಕ್ಕೆ ಹವಣಿಸುತ್ತಿದ್ದಾರೆ.

ಅವರಿಗೆ ಡಾ. ಬಾಬಾಸಾಹೇಬರ ಸರ್ವಜನ ಹಿತ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸರ್ವರಿಗೆ ಸಮ ಬಾಳ್ವೆ ಪ್ರತಿಪಾದಿಸುವ ಸಂವಿಧಾನದ ಬದಲಿಗೆ ಪುರೋಹಿತರ ಹಿತಾಸಕ್ತಿಗೆ ಮಾತ್ರ ಬದ್ಧವಾದ ಮನುಸ್ಮತಿಯನ್ನು ಸಂವಿಧಾನ ಮಾಡುವುದು ಅವರ ತುಡಿತವಾಗಿದೆ. ಈಗಿರುವ ದೇಶದ ಸಂವಿಧಾನವನ್ನು ದುರ್ಬಲ ಮತ್ತು ಅರ್ಥಹೀನಗೊಳಿಸದ ಹೊರತು, ಪ್ರಾಚೀನ ಸನಾತನಿ ಆಡಳಿತದ ಮಾದರಿ ಪುನಃಸ್ಥಾಪಿಸುವುದು ಕಷ್ಟದ ಕೆಲಸವೆಂದು ಪುರೋಹಿತಶಾಹಿಗಳಿಗೆ ತಿಳಿದಿದೆ. ಆ ಕಾರಣದಿಂದಲೇ ಅವರು ಈಗ ಸಂವಿಧಾನವನ್ನು ದುರ್ಬಲಗೊಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಮೀಸಲು ಕ್ಷೇತ್ರದಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ತಮ್ಮ ಪಕ್ಷದ ಮುಖ್ಯಸ್ಥರು ಮತ್ತು ಆ ಪಕ್ಷವನ್ನು ನಿಯಂತ್ರಿಸುವ ಪಟ್ಟಭದ್ರರಿಗೆ ವಿಧೇಯರಾಗಿ ವರ್ತಿಸುತ್ತಾರೆ. ಈ ಜನಪ್ರತಿನಿಧಿಗಳು ಸಂವಿಧಾನಕ್ಕೆ ವಿಧೇಯರಾಗಿಲ್ಲ. ಪುರೋಹಿತಶಾಹಿಗಳು ಮಾಡುತ್ತಿರುವ ದಲಿತ-ಶೂದ್ರ ವಿರೋಧಿ ಹುನ್ನಾರಗಳನ್ನು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಪಕ್ಷಾತೀತವಾಗಿ ವಿರೋಧಿಸುವ ಇಚ್ಛಾಶಕ್ತಿ ಹೊಂದಿಲ್ಲ.

ದಮನಿತರಿಗೆ ಭೂಮಿ, ಸಾಮಾಜಿಕ ಗೌರವ, ರಾಜಕೀಯ ಸ್ಥಾನಮಾನ, ಚುನಾವಣಾ ಸುಧಾರಣಾ ಕ್ರಮಗಳನ್ನು ನಿರಾಕರಿಸುತ್ತಿರುವಾಗ ತೊಂಭತ್ತರ ದಶಕದಲ್ಲಿ ಭಾರತದ ಆರ್ಥಿಕತೆ ಕುಸಿಯತೊಡಗಿತ್ತು. ಆಗ ಜಾಗತೀಕರಣ, ಆರ್ಥಿಕ ಉದಾರೀಕರಣಗಳು ಭಾರತದ ನೆರವಿಗೆ ಬಂದದ್ದೇನೋ ನಿಜ. ಆದರೆ ಅದು ಮುಂದೊಂದು ದಿನ ಮೀಸಲಾತಿಯನ್ನು ಹಂತಹಂತವಾಗಿ ನುಂಗಿ ಹಾಕುವ ಖಾಸಗೀಕರಣಕ್ಕೆ ಮುನ್ನುಡಿ ಬರೆದದ್ದು ಮಾತ್ರ ಸುಳ್ಳಲ್ಲ. ಇದು ಭಾರತದಲ್ಲಿ ವಸಹಾತುಶಾಹಿ ವ್ಯವಸ್ಥೆಯ ಪುನಃಸ್ಥಾಪನೆಗೆ ಹಾದಿ ಮಾಡಿಕೊಟ್ಟಿತು. ಭ್ರಷ್ಟಾಚಾರ ಪೂರಿತ ಆಡಳಿತ ವ್ಯವಸ್ಥೆಯ ಬೆಳವಣಿಗೆಯು ಭಾರತದಲ್ಲಿ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಯಿಂದ ಉಳ್ಳವರು ಮತ್ತು ಬಡವರ ಮಧ್ಯೆ ಬಹುದೊಡ್ಡ ಕಂದಕವೊಂದನ್ನು ನಿರ್ಮಿಸಿತು. ಇಂದು ಈ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಗಳ ದುಷ್ಪರಿಣಾಮವು ದಲಿತ ದಮನಿತರ ಉದ್ಯೋಗಗಳಲ್ಲಿನ ಮೀಸಲಾತಿಯನ್ನು ಸಂಪೂರ್ಣವಾಗಿ ನುಂಗಿ ಹಾಕುತ್ತಿದೆ.

ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮ ವಲಯವು ಉದ್ದೇಶಪೂರ್ವಕವಾಗಿಯೇ ಸಂಪೂರ್ಣವಾಗಿ ನಿಸ್ತೇಜಗೊಳಿಸಲಾಗುತ್ತಿದೆ. ಮುಂದೊಂದು ದಿನ ಭಾರತದ ಬಹುಜನರ ಭವಿಷ್ಯಕ್ಕೆ ಮಾರಕವಾಗಬಲ್ಲ ಈ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಪ್ರಕ್ರಿಯೆಗಳ ಬಗ್ಗೆ ಅಂದು ದಲಿತ ಸಂಘಟನೆಗಳು, ಮೀಸಲು ಕ್ಷೇತ್ರದ ಫಲಾನುಭವಿ ಸಂಸದ/ಶಾಸಕ/ಜನಪ್ರತಿನಿಧಿಗಳು ಮತ್ತು ಸಾಮಾಜಿಕ ಚಳವಳಿಯ ನೇತಾರರು ಸರಿಯಾಗಿ ಗ್ರಹಿಸಲಿಲ್ಲವೋ, ಆಳವಾದ ನಿದ್ರೆಯಲ್ಲಿದ್ದರೋ ಅಥವಾ ಆಗಿನ ಈ ಘಟನೆಗಳ ಬಗ್ಗೆ ಅಸಡ್ಡೆ ಹೊಂದಿದ್ದರೋ ಒಂದೂ ತಿಳಿಯದಾಗಿದೆ. ಏತನ್ಮಧ್ಯೆ, ಮೀಸಲಾತಿಯನ್ನು ಪ್ರಾಯೋಗಿಕವಾಗಿ ನಾಶಪಡಿಸುವ ಪುರೋಹಿತಶಾಹಿಗಳ ಪಿತೂರಿಯನ್ನು ಮರೆಮಾಚಲು ಸಾಮಾಜಿಕ ವರ್ಗೀಕರಣದ ಬೆಂಕಿಯನ್ನು ಸಮಾಜದಲ್ಲಿ ಜೀವಂತವಾಗಿ ಹುಟ್ಟುಹಾಕಲಾಗುತ್ತಿದೆ. ಆ ಮೂಲಕ ರಾಜಕೀಯ ಅಧಿಕಾರವನ್ನು ಮನುವಾದಿಗಳು ಹಿಡಿದು ಕುಳಿತಿದ್ದಾರೆ.

ಒಂದು ಕಡೆ ಮೀಸಲಾತಿಯನ್ನು ರಹಸ್ಯವಾಗಿ ನಾಶಮಾಡಲು ಮತ್ತು ಮತ್ತೊಂದೆಡೆ ಅಸ್ಪಶ್ಯರಲ್ಲಿ ರಾಜಕೀಯ ಜಾಗೃತಿ ಮತ್ತು ಏಕತೆಯ ಕೊರತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ದಲಿತರೊಳಗಣ ಒಳವರ್ಗೀಕರಣದ ಪರಿಕಲ್ಪನೆಯನ್ನು ಹುಟ್ಟಿಸಿ ಒಳಮೀಸಲಾತಿಯ ಒಡಕನ್ನು ಬಿತ್ತಲಾಗಿದೆ. ಅದರಂತೆ ಇತರ ಹಿಂದುಳಿದ ವರ್ಗಗಳಲ್ಲೂ ಕೂಡ ಒಳ ಮೀಸಲಾತಿಯ ಕಿಚ್ಚನ್ನು ಹೊತ್ತಿಸಿ ಅವರನ್ನು ಒಡೆಯಲಾಗುತ್ತಿದೆ. ಇದು ಸಂಪೂರ್ಣವಾಗಿ ದಲಿತರು ಮತ್ತು ಇತರ ಹಿಂದುಳಿದ ವರ್ಗಗಳನ್ನು ಮುಗಿಸುವ ಪುರೋಹಿತಶಾಹಿಗಳ ಹುನ್ನಾರವಾಗಿದೆ. ಯಾವ ಶಕ್ತಿಗಳು ಇಡೀ ಮೀಸಲಾತಿಯನ್ನೇ ಕಿತ್ತೊಗೆಯುವ ಮಾತನಾಡುತ್ತಿದ್ದಾವೋ ಅದೇ ಶಕ್ತಿಗಳ ಒಳ ಮೀಸಲಾತಿಯ ಆಮಿಷಕ್ಕೆ ಬಲಿಯಾಗಿ ಕೆಲವು ದಲಿತ ವರ್ಗಗಳು ಬೆಂಬಲಿಸುತ್ತಿರುವುದು ಇನ್ನೂ ದುರ್ದೈವದ ಸಂಗತಿಯಾಗಿದೆ. ಕಾಲಾನುಕ್ರಮದಲ್ಲಿ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮತ್ತು ಜೀವ ವಿರೋಧಿಗಳನ್ನು ದಲಿತ ದಮನಿತರು ತಮ್ಮ ಹಿತಾಸಕ್ತಿಯ ರಕ್ಷಕರು ಎಂದು ನಂಬುವಂತೆ ಮಾಡಲಾಗಿದೆ.

ಆ ಕಾರಣದಿಂದ ದಲಿತ ಚಳವಳಿ ದುರ್ಬಲಗೊಂಡು ಅವಕಾಶವಾದಿಗಳು ಅಧಿಕಾರ ರಾಜಕಾರಣದ ಅಂಗಳದಲ್ಲಿ ಹಲ್ಲುಗಿಂಜುತ್ತ ನಿಲ್ಲುವ ಮೂಲಕ ಮೀಸಲಾತಿಯ ಫಲಾನುಭವಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಮನುವಾದಿ ರಾಜಕೀಯ ಶಕ್ತಿಗಳು ಸೊಕ್ಕಲು ಕಾರಣೀಭೂತರಾದರು. ಒಂದು ಕಡೆ ದಲಿತ ಸಮುದಾಯಗಳು ಒಳ ಮೀಸಲಾತಿಯ ಕಾರಣದಿಂದ, ಮತ್ತೊಂದು ಕಡೆ ಶೂದ್ರಾತಿಶೂದ್ರ ಸಮುದಾಯಗಳು ಬೇರೆ ಬೇರೆ ಕಾರಣಗಳಿಂದ ಜಾತ್ಯತೀತತೆ, ಬಹುಸಂಸ್ಕೃತಿ, ಸಂವಿಧಾನ ಮತ್ತು ಜನತಂತ್ರ ವಿರೋಧಿ ರಾಜಕೀಯ ಶಕ್ತಿಗಳೊಡನೆ ಕೈಜೋಡಿಸುವ ಮೂಲಕ ಭಾರತೀಯ ಜಾತ್ಯತೀತ ಶಕ್ತಿಯ ಧ್ವನಿಯನ್ನು ಕ್ಷೀಣಗೊಳಿಸಿವೆ.

ದೇಶದಲ್ಲಿ ವ್ಯವಸ್ಥಿತವಾಗಿ ಜಾತ್ಯತೀತತೆ, ಸೌಹಾರ್ದ, ಬಹು ಸಂಸ್ಕೃತಿ, ಜನತಂತ್ರ ಮತ್ತು ಸಂವಿಧಾನ ನಾಶಗೊಳಿಸುವ ಪ್ರಕ್ರಿಯೆಗಳು ವೇಗ ಪಡೆಯುತ್ತಿದ್ದರೂ ಅದನ್ನು ಪ್ರಶ್ನಿಸುವ, ಪ್ರತಿಭಟಿಸುವ ಸಾಹಸ ಮಾಡದೆ ದಲಿತರು ಮತ್ತು ಶೂದ್ರರು ಗಾಢ ಮೌನ ತಾಳಿರುವುದು ಫ್ಯಾಶಿಸ್ಟರ ಹುಮ್ಮಸ್ಸನ್ನು ನೂರ್ಮಡಿಗೊಳಿಸಿದೆ. ದಲಿತ-ದಮನಿತರಲ್ಲಿ ಹೆಚ್ಚುತ್ತಿರುವ ಒಳನೋಟದ ಕೊರತೆಯೇ ಇಂದು ಸನಾತನಿ ಬ್ರಾಹ್ಮಣ್ಯ ವ್ಯವಸ್ಥೆ ಬಲಗೊಳ್ಳುವುದಕ್ಕೆ ಕಾರಣವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ‘‘ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ’’ ಎಂಬ ಡಾ. ಬಾಬಾಸಾಹೇಬ್ ಅವರ ಎಚ್ಚರಿಕೆಯ ಮಾತು ಅಕ್ಷರಶಃ ಸತ್ಯವಾಗುವ ದುರಂತ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ಜೆ.ಎಸ್. ಪಾಟೀಲ

contributor

Similar News