ದಟ್ಟಾರಣ್ಯಕ್ಕೆ ಕಾಂಕ್ರಿಟ್ ಬೇಲಿ: ನೂರಾರು ಕೋಟಿ ರೂ. ಮೊತ್ತದ ಅನುದಾನ ದುರ್ಬಳಕೆ ಆರೋಪ

Update: 2024-05-18 08:04 GMT

ಬೆಂಗಳೂರು: ಕಿರು ಅರಣ್ಯದ ಬದಲಿಗೆ ದಟ್ಟಾರಣ್ಯಕ್ಕೆ ಕಾಂಕ್ರಿಟ್ ಬೇಲಿ ಹಾಕುವ ರೂಟ್ ಸ್ಟಾಕ್ ಯೋಜನೆಗೆ ಸಂಬಂಧದ ನೂರಾರು ಕೋಟಿ ರೂ. ಮೊತ್ತದ ಅನುದಾನವನ್ನು ಅರಣ್ಯಾಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಬೆಳಗಾವಿ ಮೂಲದ ಸುರೇಂದ್ರ ಉಗಾರೆ ಎಂಬವರು ಲೋಕಾಯುಕ್ತ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು "The-file.in"ಗೆ ಲಭ್ಯವಾಗಿದೆ.

ನೆಡು ತೋಪು ನಿರ್ಮಾಣ, ಜಿಪಿಎಸ್ ಆಧರಿತ ಗಡಿ ನಿಗದಿ, ತಂತಿ ಬೇಲಿ, ಸಿಮೆಂಟ್ ಕಂಬ ಮತ್ತು ಮುಳ್ಳು ತಂತಿ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಳಲ್ಲಿ ಅರಣ್ಯ ಇಲಾಖೆಯ ಯಾವೊಂದು ನಿಯಮವೂ ಪಾಲನೆಯಾಗಿಲ್ಲ. ಅಧಿಕಾರಿಗಳು ಅರಣ್ಯ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ ಸರ್ಕಾರದ ಅನುದಾನವನ್ನು ಕಬಳಿಸಿದ್ದಾರೆ ಎಂದು ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಉಗಾರೆ ಅವರು ವಿವರಿಸಿರುವುದು ಗೊತ್ತಾಗಿದೆ.

‘ಇಲಾಖೆಯ ಸಂಪೂರ್ಣ ಅನುದಾನ ದುರುಪಯೋಗವಾಗಿದೆ. ಸರಕಾರಿ ಹಣವನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿಲ್ಲ. ಬದಲಿಗೆ ಕಬಳಿಸಿಕೊಂಡು ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ’ ಎಂದು ದೂರಿದ್ದಾರೆ. ಇದಕ್ಕೆ ಕಾರಣರಾದ ಅಧಿಕಾರಿಗಳ ಹೆಸರುಗಳನ್ನೂ ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

2022-23ನೇ ಸಾಲಿನಲ್ಲಿ ಕಲಕೇರಿ ಬ್ಲಾಕ್ ನಂ 7, ಸರ್ವೇ ನಂಬರ್ 114, 112, 49,96,700 ರೂ, 11, 61, 248 ರೂ., 4,88, 419 ರೂ. ಮೊತ್ತದ ಕಾಮಗಾರಿ, 2023-24ರಲ್ಲಿ ಇದೇ ಬ್ಲಾಕ್‌ನಲ್ಲಿ 17, 44,500 ರೂ. ಸೇರಿ ಒಟ್ಟಾರೆ 83,90,867 ರೂ. ಮೊತ್ತದ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು.

ಈ ಅನುದಾನವನ್ನು ಬಳಸಿಕೊಂಡಿರುವ ಅರಣ್ಯಾಧಿಕಾರಿಗಳು ನಿಯಮಗಳ ಪ್ರಕಾರ ಕಾಮಗಾರಿ ನಡೆಸದೇ ಲೂಟಿಗೈದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.

ಜಿಪಿಎಸ್ ಅಧಾರಿತ ಕೆಎಂಎಲ್ ಫೈಲ್ ನಕಾಶೆ ಪ್ರಕಾರ ಬೌಂಡರಿ ನಿಗದಿಪಡಿಸಿ ಸಿಮೆಂಟ್ ಕಂಬ ಹಾಕಿ ಮುಳ್ಳುತಂತಿ ಬೇಲಿ ಅಳವಡಿಸಿಲ್ಲ. ನೆಡುತೋಪು ನಿರ್ಮಾಣ ಮಾಡಲು ಸಲ್ಲಿಸಿದ ಪ್ರಸ್ತಾವದಂತೆ 5600 ಮೀಟರ್ ಅಳತೆಗನುಣವಾಗಿ ಮುಳ್ಳು ತಂತಿ ಅಳವಡಿಸಿಲ್ಲ. ತಂತಿ ಬೇಲಿ ಕಾಮಗಾರಿ ಅಪೂರ್ಣವಾಗಿರುವ ಕಾರಣ ದನಕರುಗಳು ಪ್ರತಿ ದಿನ ನೆಡುತೋಪಿಗೆ ದಾಳಿಯಿಟ್ಟಿವೆ.

ಸ್ವಾಭಾವಿಕ ಅರಣ್ಯ ಸಂರಕ್ಷಿಸಿ ಬೆಳೆಸುವ ಉದ್ದೇಶದಿಂದಲೇ ನಿರ್ಮಾಣ ಮಾಡುವ ನೆಡುತೋಪಿನಲ್ಲಿ ನಾಟಿ ಮಾಡಿದ ಸಸಿಗಳು ಹಾಳಾಗುತ್ತಿವೆ. ನೆಡುತೋಪು ಪ್ರಸ್ತಾವನೆಯಂತೆ 150 ಹೆಕ್ಟೇರ್ ಕ್ಷೇತ್ರಕ್ಕೆ ಅನುಮೋದನೆ ನೀಡಿದ್ದರೂ ವಾಸ್ತವದಲ್ಲಿ 150 ಹೆಕ್ಟೇರ್ ಕ್ಷೇತ್ರವಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪ್ರತೀ 3 ಮೀಟರ್‌ಗೆ ಒಂದು ಸಿಮೆಂಟ್ ಕಂಬ ಒಟ್ಟು 2,603 ಕಂಬಗಳನ್ನು ಉಪಯೋಗಿಸಿ ಅದರಲ್ಲಿ ಪ್ರತಿ 6 ಕಂಬಳಿಗೆ ಸಪೋರ್ಟ್ ಕಂಬಗಳಿರಬೇಕು. ನಾಲ್ಕು ಸಾಲ ಉದ್ದ ಮತ್ತು ಕ್ರಾಸ್ ಮಾಡಿದ ಮುಳ್ಳು ತಂತಿಗಳು ಇರಬೇಕು ಎಂಬ ನಿಯಮವಿದೆ. ಆದರೆ ಇದನ್ನು ಪಾಲಿಸಿಲ್ಲ ಎಂದು ದೂರಲಾಗಿದೆ.

ಕೇವಲ 1500 ಕಂಬಗಳನ್ನು ಮಾತ್ರ ಹಾಕಿದ್ದಾರೆ. ಸಪೋರ್ಟ್ ಕಂಬಗಳನ್ನು 10 ಮಾತ್ರ ಹಾಕಿರುತ್ತಾರೆ. ಕ್ರಾಸ್ ಮುಳ್ಳು ತಂತಿಗಳನ್ನು ಅಳವಡಿಸಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

4.88 ಲಕ್ಷ ರೂ. ಮೊತ್ತದ ಯೋಜನೆಯ ಪ್ರಕಾರ ನೆಡತೋಪು ಪ್ರದೇಶದಲ್ಲಿ 432 ನೀರು ಇಂಗು ಗುಂಡಿಗಳ ನಿರ್ಮಾಣ ಮಾಡಬೇಕಿತ್ತು. ಆದರೆ 200 ಇಂಗು ಗುಂಡಿಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. 150 ಹೆಕ್ಟೇರ್ ನೆಡುತೋಪು ಪ್ರದೇಶದಲ್ಲಿ 50 ಹೆಕ್ಟೇರ್ ಪ್ರದೇಶ ಆಯ್ಕೆ ಮಾಡಲಾಗಿದೆ. ಅದರಲ್ಲಿ 6000 ಸಸಿಗಳನ್ನು ನೆಡಬೇಕಾಗಿದ್ದರೂ ಕದರಲ್ಲಿ 3,000 ಸಸಿಗಳನ್ನು ಮಾತ್ರ ನೆಡಲಾಗಿದೆ ಎಂದು ದೂರಿನಿಂದ ತಿಳಿದು ಬಂದಿದೆ.

ನೆಡುತೋಪು ಮಾಡಲು ಯೋಗ್ಯ ಇಲ್ಲದ 1-12 ಅಡಿ ಎತ್ತರದ ಸಸಿಗಳನ್ನು ನೆಟ್ಟು ಯೋಜನೆ ರೂಪು ರೇಷೆಗಳನ್ನು ಹಾಳು ಮಾಡಿದ್ದಾರೆ. ನೆಡು ತೋಪು ನಿರ್ಮಾಣ ಮಾಡುವ ಮೊದಲು ಮಣ್ಣು ಪರೀಕ್ಷೆ, ಪೋಷಕಾಂಶ ಪರೀಕ್ಷೆ ಮಾಡಿಸಬೇಕು ಎಂಬ ನಿಯಮವಿದೆ. ಆದರೆ ಇದನ್ನು ಪಾಲಿಸಿಲ್ಲ,’ ಎಂದು ಉಗಾರೆ ಅವರು ಆರೋಪಿಸಿದ್ದಾರೆ.

ದೂರಿನಲ್ಲಿ ಯಾರ್ಯಾರ ಹೆಸರು?

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಉಪ ವಲಯ ಅರಣ್ಯಾಧಿಕಾರಿ ಪರಶುರಾಮ ಮಣಕೂರು, ವಲಯ ಅರಣ್ಯಾಧಿಕಾರಿ ಪ್ರದೀಪ ಪವಾರ, ರಾಮಲಿಂಗಪ್ಪ ಉಪ್ಪಾರ, ಪರಿಮಳ ಹುಲಗಣ್ಣವರ ಮತ್ತಿತರರು ಅರಣ್ಯ ಗುತ್ತಿಗೆದಾರರ ಜೊತೆ ಕೈಗೂಡಿಸಿ ಅಪೂರ್ಣ ನೆಡುತೋಪು ಕಾಮಗಾರಿಯನ್ನು ಮಾಡಿದ್ದಾರೆ. ಇವರು ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ. ಈ ಎಲ್ಲ ಅಕ್ರಮಗಳಲ್ಲಿ ಭಾಗಿಯಾದ ಅರಣ್ಯ ಅಧಿಕಾರಿಗಳು ಪ್ರಭಾವಿಗಳು ಆಗಿರುವುದರಿಂದ ಈ ಕೂಡಲೇ ತನಿಖೆ ನಡೆಸಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ಸಹಿ ಇಲ್ಲದೇ ಬಿಲ್ ಮಂಜೂರು

ಕಾಮಗಾರಿ ಉಸ್ತುವಾರಿ ವಹಿಸಿದ ಉಪ ವಲಯ ಅರಣ್ಯಾಧಿಕಾರಿ ಸಹಿ ಇಲ್ಲದೇ ಬಿಲ್ ಮಂಜೂರು ಮಾಡಲಾಗಿದೆ. ಗುತ್ತಿಗೆದಾರರ ಸಹಿ ಇಲ್ಲದೇ ಬಿಲ್ ಮಂಜೂರು ಮಾಡಲಾಗಿದೆ. ಗುತ್ತಿಗೆದಾರರು ಒಡಂಬಡಿಕೆ ಪತ್ರ ಮಾಡಿಕೊಳ್ಳದೇ ಬಿಲ್ ಮಂಜೂರು ಮಾಡಲಾಗಿದೆ. ಗುತ್ತಿಗೆದಾರರ ಸಭೆ ನಡವಳಿ ಇಲ್ಲ, ಈ ಸಭೆಯಲ್ಲಿ ತೀರ್ಮಾನಿಸಿದ ಸಂಧಾನ ಮಾಡಿ ಮಂಜೂರಾದ ಮೊತ್ತವನ್ನು ನೇರವಾಗಿ ಗುತ್ತಿಗೆದಾರರಾರಿಗೆ ಬಿಲ್ ಮಾಡಲಾಗಿದೆ ಎಂದು ದೂರಿದ್ದಾರೆ.

ಎಫ್‌ಎನ್‌ಬಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಶೇ. 10 ಚೆಕ್ ಅಳತೆ ಮಾಡದೇ ಕ್ಷೇತ್ರ ತಪಾಸಣೆ ಮಾಡದೇ ಬಿಲ್ ಮಂಜೂರು ಮಾಡಿದೆ. ನೆಡುತೋಪು ಕಾಮಗಾರಿಯಲ್ಲಿ ಸಂಬಂಧಿಸಿದ ಉಪ ವಲಯ ಅರಣ್ಯಾಧಿಕಾರಿ ಕಲಕೇರಿ ಶಾಖೆ ಇವರು ಶೇ. 100ರಷ್ಟು ಕೆಲಸ ನೋಡಿ ಖಾತ್ರಿಪಡಿಸಿಕೊಂಡು ಅರಣ್ಯ ಅಳತೆ ಪುಸ್ತಕದಲ್ಲಿ ದಾಖಲಿಸಿ ಸಹಿ ಮಾಡಬೇಕು. ನಂತರ ವಲಯ ಅರಣ್ಯಾಧಿಕಾರಿಯವರು ಶೇ. 100ರಷ್ಟು ಕೆಲಸ ನೋಡಿ ಖಾತರಿಪಡಿಸಿಕೊಂಡು ಪುಸ್ತಕದಲ್ಲಿ ಸಹಿ ಮಾಡಬೇಕಕು. ಈ ರೀತಿ ನಿಯಮವಿದ್ದರೂ ಅಧಿಕಾರಿಗಳು ಇದಾವುದನ್ನೂ ಮಾಡದೇ ಅರಣ್ಯ ಗುತ್ತಿಗೆದಾರನಿಗೆ ಇಲಾಖೆಯ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News