ಮಳೆ ನೀರಿನಲ್ಲಿ ಮುಳುಗಿದ ವಲಸೆ ಕಾರ್ಮಿಕರ ಬದುಕು

Update: 2024-10-26 08:52 GMT

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿ ಇದೆ. ಯಲಹಂಕದ ಜಕ್ಕೂರಿನ ಸುರಭಿ ಲೇಔಟ್‌ನಲ್ಲಿ 62 ವಲಸೆ ಕಾರ್ಮಿಕ ಕುಟುಂಬಗಳ ಜೋಪಡಿಗಳಿಗೆ ಮಳೆ ನೀರು ನುಗ್ಗಿ ಜಲಾವೃತಗೊಂಡ ಪರಿಣಾಮ ವಲಸೆ ಕಾರ್ಮಿಕರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.

ಆಂಧ್ರಪ್ರದೇಶದ ಮಂತ್ರಾಲಯದಿಂದ ನಗರಕ್ಕೆ ಬಂದಿದ್ದ ಕುಟುಂಬಗಳ ಬಹುತೇಕ ಮಂದಿ ಕಟ್ಟಡ ಕಾರ್ಮಿಕರಾಗಿದ್ದು, ಮಹಿಳೆಯರು ಸಮೀಪದಲ್ಲಿನ ಮನೆಗಳಲ್ಲಿ ಕಸ-ಮುಸುರೆ ಕೆಲಸ ಮಾಡಿಕೊಂಡು ಜೋಪಡಿಗಳಲ್ಲಿ ವಾಸಿಸುತ್ತಿದ್ದರು. ಈ ಕುಟುಂಬಗಳಲ್ಲಿ 10 ವರ್ಷದೊಳಗಿನ ಸುಮಾರು 40ಕ್ಕೂ ಅಧಿಕ ಮಕ್ಕಳಿದ್ದಾರೆ. ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ಕಾರ್ಮಿಕ ಕುಟುಂಬಗಳು 15 ವರ್ಷಗಳಿಂದಲೂ ನೆಲಬಾಡಿಗೆ ಕಟ್ಟಿ, ಜೋಪಡಿ ಹಾಕಿಕೊಂಡಿದ್ದವರು.

ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೆ ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದರು. ನಿರಂತ ರವಾಗಿ ಸುರಿದ ಮಳೆಯಿಂದಾಗಿ ವಾಸ ಮಾಡುತ್ತಿದ್ದ ಜಾಗವೆಲ್ಲ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಎಲ್ಲ ಮನೆಗಳಿಗೆ ನೀರು ನಿಂತಿದ್ದು, ಕೂರಲು ಜಾಗವಿಲ್ಲದೆ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ಮಳೆಯಿಂದಾಗಿ ಜೋಪಡಿಗಳಲ್ಲಿ ಇದ್ದಂತಹ ಬಟ್ಟೆ, ವಸ್ತುಗಳು, ಆಹಾರ ಪದಾರ್ಥಗಳು, ಸಂಪೂರ್ಣ ನೀರುಪಾಲಾಗಿ ನಿತ್ಯದ ಅಗತ್ಯ ವಸ್ತುಗಳನ್ನು ಕಳೆದು ಕೊಂಡಿದ್ದಾರೆ. ಇದರಿಂದ ಕಾರ್ಮಿಕರು ಹಾಗೂ ಅವರ ಮಕ್ಕಳು ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದ ಸ್ಥಿತಿಗೆ ತಲುಪಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಅ.22ರಂದು ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಿದ್ದರು. ಅನಂತರ ಯಾವುದೇ ಜನಪ್ರತಿನಿಧಿಗಳು, ಬಿಬಿಎಂಪಿ ಅಥವಾ ಸರಕಾರಿ ಅಧಿಕಾರಿಗಳೂ ಭೇಟಿ ನೀಡಿಲ್ಲ ಎಂದು ಅಲ್ಲಿನ ಕೂಲಿ ಕಾರ್ಮಿಕರ ಅಳಲು.

ನಾಲ್ಕು ದಿನಗಳಿಂದ ಕಾರ್ಮಿಕರು ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ. ಮಳೆ ನಿಂತರೂ ಜೋಪಡಿಗಳಿದ್ದ ಜಾಗದಲ್ಲಿನ ನೀರು ಇನ್ನೂ ಇಳಿದಿಲ್ಲ. ಈ ಮೊದಲು ಬಡ ಕೂಲಿ ಕಾರ್ಮಿಕರು ಸೌದೆ (ಕಟ್ಟಿಗೆ) ಒಲೆಯಲ್ಲೇ ಅಡುಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಇದೀಗ ಅದು ಸಾಧ್ಯವಾಗದೆ ಹೋಗಿದೆ ಎನ್ನುತ್ತಾರೆ ವಲಸೆ ಕಾರ್ಮಿಕ ಮುತುಕಪ್ಪ.

ಪ್ರಕೃತಿಯ ವಿಕೋಪದಿಂದಾಗಿ ಅತಂತ್ರ ಸ್ಥಿತಿಗೆ ತಲುಪಿದ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಂತುಕೊಳ್ಳಬೇಕಿದ್ದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕಾರ್ಮಿಕರ ಪರಿಸ್ಥಿತಿಯನ್ನು ವಿಚಾರಿಸಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗಿಲ್ಲ. ಕೂಡಲೇ ಸರಕಾರ ಜೋಪಡಿಗಳನ್ನು ಕಳೆದುಕೊಂಡ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಜೋಪಡಿಗಳನ್ನು ನಿರ್ಮಿಸಿ ಪಡಿತರ, ಬಟ್ಟೆ, ಹಾಸಿಗೆಗಳನ್ನು ಒದಗಿಸಬೇಕು. ಮನೆಗಳಲ್ಲಿ ನಿಂತ ನೀರನ್ನು ಹೊರಹಾಕುವುದು ಆದ್ಯತೆಯ ಮೇರೆಗೆ ಕ್ರಮವಹಿಸಬೇಕು. ಜೋಪಡಿಗಳನ್ನು ಕಳೆದುಕೊಂಡ ಕುಟುಂ ಬಗಳಿಗೆ ಪರಿಹಾರ ಒದಗಿಸಬೇಕು. ಬೆಂಗ ಳೂರಿನ ಇತರ ಭಾಗಗಳಲ್ಲಿ ಪ್ರವಾಹಕ್ಕೆ ಸಿಲುಕಿದ ಕಾರ್ಮಿಕರನ್ನು ಗುರುತಿಸಿ ಅವರಿಗೂ ರಕ್ಷಣೆ ನೀಡಬೇಕು ಎಂಬುದು ಅಲ್ಲಿನ ಕಾರ್ಮಿಕರ ಆಗ್ರಹವಾಗಿದೆ.

ಬೆಂಗಳೂರಿನಂತಹ ಮಹಾನಗರದಲ್ಲಿಯೂ ವಿದ್ಯುತ್ ವ್ಯವಸ್ಥೆ, ಒಳಚರಂಡಿ, ಮೂಲಭೂತ ವ್ಯವಸ್ಥೆಗಳಿಲ್ಲದಿರುವುದನ್ನು ನೋಡಿದಾಗ, ಸರಕಾರದ ಗ್ಯಾರಂಟಿಗಳು ಯಾರಿಗಾಗಿ? ಎಂದು ಪ್ರಶ್ನೆ ಬರುತ್ತದೆ. ಸಮಾಜದಲ್ಲಿ ಸಾಮಾನ್ಯ ಜನರೂ ಘನತೆಯಿಂದ ಬದುಕಲು ಒಂದು ನಿವೇಶನ ಮತ್ತು ಗೌರವದಿಂದ ಬಾಳುವಷ್ಟು ವೇತನ ನೀಡುವವರೆಗೂ, ಸರಕಾರಗಳು ಯಾವುದೇ ಗ್ಯಾರಂಟಿಗಳು ನೀಡಿದರು ಬಡವರಿಗೆ ಕಷ್ಟಗಳು ತಪ್ಪುವುದಿಲ್ಲ.

-ಮೈತ್ರೇಯಿ, ವಕೀಲೆ

ನಾಲ್ಕು ದಿನಗಳಿಂದ ಊಟಕ್ಕೆ ಪರದಾಟ

ಬಿಬಿಎಂಪಿ ಅಧಿಕಾರಿಗಳು ಅಪಾರ್ಟ್ ಮೆಂಟ್‌ಗಳಿರುವ ಜಾಗಗಳಿಗೆ ಹೋಗಿ ಕಷ್ಟ-ಸುಖಗಳನ್ನು ವಿಚಾರಿಸುತ್ತಾರೆ. ಆದರೆ, ನಮ್ಮಂತ ಬಡವರು, ವಲಸೆ ಕೂಲಿ-ಕಾರ್ಮಿಕರು ಬದುಕುತ್ತಿರುವ ಬೀದಿಗಳಿಗೆ ಯಾವ ಅಧಿಕಾರಿಯೂ ಬಂದು ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ನಾಲ್ಕು ದಿನಗಳಿಂದ ನಾವೆಲ್ಲರೂ ಊಟಕ್ಕೆ ಪರದಾಡುತ್ತಿದ್ದೇವೆ. ಪುನಃ ಮಳೆ ಬಂದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕೆ ಹತ್ತಿರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಹೋಗಿ ತಂಗುತ್ತಿದ್ದೇವೆ.

-ಮುತುಕಪ್ಪ, ವಲಸೆ ಕಾರ್ಮಿಕ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮನೋಜ್ ಆಜಾದ್

contributor

Similar News