ಪೊಳಲಿ-ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿರ್ಬಂಧ ಖಂಡಿಸಿ ಅ.15ರಂದು ಪ್ರತಿಭಟನೆ
ಮಂಗಳೂರು, ಅ.13: ಪೊಳಲಿ-ಅಡ್ಡೂರು ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಿರುಕು ಬಿಟ್ಟಿದೆ ಎಂದು ಜಿಲ್ಲಾಧಿಕಾರಿಯ ಆದೇಶದಂತೆ ಆ ಸೇತುವೆಯಲ್ಲಿ ಘನ ವಾಹನಗಳು ಸಂಚರಿಸಿದಂತೆ ನಿರ್ಬಂಧ ಹೇರಿ ಎರಡು ತಿಂಗಳು ಕಳೆದಿದ್ದರೂ ಸೂಕ್ತ ಕ್ರಮ ಜರುಗಿಸದ್ದನ್ನು ಖಂಡಿಸಿ ಅ.15ರಂದು ಪೊಳಲಿಯಲ್ಲಿ ಪ್ರತಿಭಟನೆ ನಡೆಸಲು ಸಾರ್ವಜನಿಕರು ನಿರ್ಧರಿಸಿದ್ದಾರೆ.
ಈ ಬಗ್ಗೆ ರವಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಈ ಸೇತುವೆ ಸಾಮರ್ಥ್ಯ ಧಾರಣಾ ತಂಡವು ಪರಿಶೀಲನೆ ನಡೆಸಿದರೂ ದುರಸ್ತಿಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಹಾಗೂ ಸುತ್ತಮುತ್ತಲಿನ ನಾಗರಿಕರು ಸಂಕಷ್ಟಕ್ಕೀಡಾಗಿದ್ದಾರೆ. ಸೇತುವೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲು ತುರ್ತು ಸಭೆ ನಿರ್ಧರಿಸಿದೆ.
ಪರ್ಯಾಯ ರಸ್ತೆಯನ್ನು ಕಲ್ಪಿಸಲು ಜನಪ್ರತಿನಿಧಿಗಳಿಗೆ ಮನವಿ ಮಾಡಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರತಿಭಟನೆ ಮಾಡುವ ಬಗ್ಗೆ ಚರ್ಚಿಸಲು ರವಿವಾರ ಪೊಳಲಿ ರಾಮಕೃಷ್ಣ ತಪೋವನ ರಾಜರಾಜೇಶ್ವರೀ ಸಭಾಂಗಣದಲ್ಲಿ ಸಭೆ ನಡೆಸಿದ ಸಾರ್ವಜನಿಕರು ಅ.15ರಂದು ಎಲ್ಲರೂ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿ, ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ವೇದಿಕೆಯಲ್ಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯಾನಂದ ಸ್ವಾಮೀಜಿ, ಪೊಳಲಿ ಅಡ್ಡೂರು-ಫಲ್ಗುಣಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್ ನಾವುಡ, ಚಂದ್ರಹಾಸ್ ಪಲ್ಲಿಪಾಡಿ, ಜಯರಾಮಕೃಷ್ಣ ಪೊಳಲಿ, ನೂಯಿ ಬಾಲಕೃಷ್ಣ ರಾವ್, ಅಬೂಬಕರ್ ಅಮ್ಮುಂಜೆ ಉಪಸ್ಥಿತರಿದ್ದರು.
ಸಭೆಯಲ್ಲಿ ರಾದಾ ಲೋಕೇಶ್ ಪಲ್ಲಿಪಾಡಿ, ಯಶವಂತ್ ಪೊಳಲಿ, ಚಂದ್ರಶೇಖರ್ ಶೆಟ್ಟಿ, ಸುಕೇಶ್ ಚೌಟ, ಶಶಿಕಿರಣ್ ಬಡಗಬೆಳ್ಳೂರು, ಮಮತಾ ಬಡಗಬೆಳ್ಳೂರು, ಸಂದೀಪ್ ತೆಂಕಬೆಳ್ಳೂರು, ಸತ್ಯಪ್ರಸಾದ್ ಶೆಟ್ಟಿ, ಕಾರ್ತಿಕ್ ಬಲ್ಲಾಳ್, ವಿಜಯ ಮತ್ತಿತರರು ಪಾಲ್ಗೊಂಡಿದ್ದರು.