ಅ.2ರಿಂದ ರಾಷ್ಟ್ರೀಯ ಓಪನ್/ರಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ

Update: 2024-09-24 13:02 GMT

ಮಂಗಳೂರು : ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ಮಂಗಳೂರು ವತಿಯಿಂದ ರಾಷ್ಟ್ರೀಯ ಓಪನ್/ರಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ ಅ. 2 ಮತ್ತು 3ರಂದು ಮಂಗಳೂರು ಟೌನ್‌ಹಾಲ್ ನಲ್ಲಿ 9 ರೌಂಡ್‌ಗಳಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ರಮೇಶ್ ಕೋಟೆ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನಮ್ಮ ಜಿಲ್ಲೆಯಲ್ಲಿ ಚೆಸ್ ದಿನೇ ದಿನೇ ಬಹಳ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ ಎಂದರು.

ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಜಿಲ್ಲೆ ಹೊಂದಿದೆ. ಚೆಸ್ ಆಟದ ಬೆಳವಣಿಗೆಯ ಪೂರಕವಾಗಿ ನಾವು ಈ ಪಂದ್ಯಾಟವನ್ನು ಹಮ್ಮಿಕೊಂಡಿದ್ದು,ಇದರಲ್ಲಿ,ಬೇರೆ ಬೇರೆ ರಾಜ್ಯಗಳ ಆಟಗಾರರು ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಸಹಿತ ಸುಮಾರು 400 ಆಟಗಾರರು ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ.

ಪಂದ್ಯಾವಳಿಯ ಉದ್ಘಾಟನೆಯನ್ನು ಅ. 2 ರಂದು ಎಂಆರ್‌ಪಿಎಲ್‌ನ ಆಡಳಿತ ಮಂಡಳಿ ನಿರ್ದೇಶಕ ಸುದರ್ಶನ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರವಿಂದ ಶಾಸ್ತ್ರಿ, ಕೆಎಸ್‌ಸಿಎಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಗುರು ರಾಜ್ ಭಾಗವಹಿಸಲಿರುವರು. ಅ. 3ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಎಂಆರ್‌ಪಿಎಲ್‌ನ ಜಿಜಿಎಂ ಕೃಷ್ಣ ಹೆಗ್ಡೆ ಹಾಗೂ ಇತರ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಟೂರ್ನಿಯಲ್ಲಿ 2.4 ಲಕ್ಷ ರೂ. ನಗದು ಬಹುಮಾನ, ಅಲ್ಲದೇ ಅ. 3ರಂದು ಮಧ್ಯಾಹ್ನ ನಂತರ ಬ್ಲಿಟ್ಜ್ ಚೆಸ್ ಪಂದ್ಯಾಟವನ್ನೂ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ವಿವಿಧ ವಿಭಾಗಗಳ ಟ್ರೋಫಿ ಜೊತೆಗೆ ಸುಮಾರು ನೂರೈವತ್ತಕ್ಕೂ ಮಿಕ್ಕಿ ಬಹುಮಾನಗಳು ಇರಲಿವೆ ಎಂದರು.

ಅಸೋಸಿಯೇಷನ್ ಗೌರವಾಧ್ಯಕ್ಷ ಸುನಿಲ್ ಆಚಾರ್, ಉಪಾಧ್ಯಕ್ಷೆ ವಾಣಿ ಎಸ್. ಪಣಿಕ್ಕರ್, ಕೋಶಾಧಿಕಾರಿ ಪೂರ್ಣಿಮಾ ಎಸ್. ಆಳ್ವ, ಜತೆ ಕಾರ್ಯದರ್ಶಿ ಸತ್ಯಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News