ಮಹಿಳೆಯರ ಬಗ್ಗೆ ನಿಂದನೆ ಆರೋಪ: ಅರಣ್ಯಾಧಿಕಾರಿ ಸಂಜೀವ ಪೂಜಾರಿ ಬೆಳ್ಳಾರೆ ಪೊಲೀಸ್ ವಶಕ್ಕೆ

Update: 2024-10-18 14:21 GMT

ಸಂಜೀವ ಪೂಜಾರಿ

ಪುತ್ತೂರು: ಬಿಲ್ಲವ ಸಮುದಾಯದ ಮಹಿಳೆಯರು ಹಾಗೂ ಭಜನೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದಲ್ಲಿ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪುತ್ತೂರು ಡಿವೈಎಸ್‍ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ಬೆನ್ನಿಗೇ ಆರೋಪಿ ಸಂಜೀವ ಪೂಜಾರಿ ಅವರನ್ನು ಬೆಳ್ಳಾರೆ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರು ಮಾತನಾಡಿದ್ದಾರೆ ಎನ್ನಲಾದ 'ಆಡಿಯೋ' ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಬಿಲ್ಲವ ಹೆಣ್ಣು ಮಕ್ಕಳನ್ನು ಭಜನಾ ಕಾರ್ಯಕ್ರಮದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅಶ್ಲೀಲ ಶಬ್ದ ಬಳಕೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹಸಂಯೋಜಕ ಸಮಿತ್‍ ರಾಜ್ ಧರೆಗುಡ್ಡೆ ಅವರು ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಸಂಜೀವ ಪೂಜಾರಿಗೆ ಸಾರ್ವಜನಿಕವಾಗಿ ಹೆಣ್ಣು ಮಕ್ಕಳಿಂದ ಚಪ್ಪಲಿ ಸೇವೆ ಮಾಡಿಸಿ ಬಳಿಕ ಆತನ ನಾಲಿಗೆಯನ್ನು ಕತ್ತರಿಸುವ ಕೆಲಸ ಮಾಡುತ್ತೇವೆ ಎಂದರು.

ಸಂಜೀವ ಪೂಜಾರಿ ವಿರುದ್ಧ ಜಾಮೀನು ರಹಿತ ಕೇಸು ಹಾಕಿಲ್ಲ ಎಂದು ಪ್ರತಿಭಟನಾ ನಿರತರಿಗೆ ತಿಳಿಸಿದ ಡಿವೈಎಸ್‍ಪಿ ಅರುಣ್ ನಾಗೇಗೌಡ ಅವರು ನಾವು ಆತನ ಬಂಧನಕ್ಕೆ ಹೋಗಿದ್ದೆವು. ಇಂದು ಸಂಜೆಯೊಳಗೆ ಆತನನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಡಿವೈಎಸ್ಪಿ ಅವರು ನೀಡಿದ ಭರವಸೆಯಿಂದ ಪ್ರತಿಭಟನೆಯನ್ನು ವಾಪಾಸು ಪಡೆದುಕೊಂಡರು.

ಪ್ರತಿಭಟನೆಯಲ್ಲಿ ಸಂಘಪರಿವಾರದ ಸಂಘಟನೆಗಳ ಮುಖಂಡರಾದ ಮುರಳೀಕೃಷ್ಣ ಹಸಂತ್ತಡ್ಕ, ಜಿಲ್ಲಾ ಸಂಯೋಜಕ ಮೋಹನ್‍ ದಾಸ್, ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ದಿನೇಶ್ ಪಂಜಿಗ, ರವಿರಾಜ್ ಶೆಟ್ಟಿ ಕಡಬ, ಭರತ್ ಈಶ್ವರಮಂಗಲ, ಅನೂಪ್ ಎಣ್ಮೂರು, ಜಯಂತ ಕುಂಜೂರುಪಂಜ, ಸಂತೋಷ್ ಕೈಕಾರ, ಚನಿಲ ತಿಮ್ಮಪ್ಪ ಶೆಟ್ಟಿ, ಡಾ.ಕೃಷ್ಣಪ್ರಸನ್ನ, ಜೀವಂಧರ್ ಜೈನ್, ರಾಜೇಶ್ ಬನ್ನೂರು, ದಾಮೋದರ ಪಾಟಾಳಿ, ಯಶೋದಾ ಗೌಡ, ಚಂದ್ರಕಾಂತಿ ವಿಟ್ಲ ಮತ್ತಿತರರು ಪಾಲ್ಗೊಂಡಿದ್ದರು.

ಸಂಜೀವ ಪೂಜಾರಿ ಪೊಲೀಸ್ ವಶಕ್ಕೆ

ಸಂಜೀವ ಪೂಜಾರಿ ವಿರುದ್ಧ ಕೇಸು ದಾಖಲಿಸುವಂತೆ 3 ದಿನಗಳ ಹಿಂದೆ ಹಿಂಜಾವೇ ವತಿಯಿಂದ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಆತನನ್ನು ವಿಚಾರಣೆ ನಡೆಸಲಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂದರ್ಭ ಆತನನ್ನು ಬಂಧಿಸುವುದಾಗಿ ಡಿವೈಎಸ್‍ಪಿ ಭರವಸೆ ನೀಡಿದ್ದು, ಪ್ರತಿಭಟನೆ ನಡೆಸಿದ ಬೆನ್ನಿಗೇ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಕಾಣಿಯೂರಿನ ಸಂಜೀವ ಪೂಜಾರಿ ಅವರ ಮನೆಯಿಂದ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News