ಹರೇಕಳದಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನ: ಪ್ಲಾಸ್ಟಿಕ್ ತ್ಯಾಜ್ಯ ತಂದವರಿಗೆ ಅಕ್ಕಿ ವಿತರಣೆ

Update: 2023-09-30 15:09 GMT

ಮಂಗಳೂರು: ಹರೇಕಳ‌ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ,ಉಳ್ಳಾಲ ತಾಲೂಕು ಪತ್ರಕರ್ತರ ಸಂಘ, ದ.ಕ. ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ , ಹರೇಕಳ ಗ್ರಾಮ ಪಂಚಾಯತ್ ಮತ್ತು ಜನಶಿಕ್ಷಣ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ಪ್ಲಾಸ್ಟಿಕ್ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ 210.52 ಕೆ.ಜಿ.ಪ್ಲಾಸ್ಟಿಕ್ ಸಂಗ್ರಹ ವಾಗಿದೆ. ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ತಂದವರಿಗೆ 1200 ಕೆ.ಜಿ ಅಕ್ಕಿ ವಿತರಿಸಲಾಯಿತು.

ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನದ ಅಂಗವಾಗಿ ಸಾರ್ವಜನಿಕರು ತರುವ 100 ಗ್ರಾಂ ನಿಂದ 500 ಗ್ರಾಂ ವರೆಗಿನ ಪ್ಲಾಸ್ಟಿಕ್ ಗೆ 1 ಕೆಜಿ ಆಕ್ಕಿ ಹಾಗೂ 500 ಗ್ರಾಂ ಮೇಲ್ಪಟ್ಟು ಪ್ಲಾಸ್ಟಿಕ್ ತಂದ ಸಾರ್ವಜನಿಕರಿಗೆ 5 ಕೆಜಿ ಅಕ್ಕಿಯನ್ನು ಹಾಗೂ 1 ಕೆಜಿ ಮೇಲ್ಪಟ್ಟು ಪ್ಲಾಸ್ಟಿಕ್ ತಂದವರಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲಾಗುವುದು ಎಂದು ತಿಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಹರೇಕಳ ಗ್ರಾಮ ಪಂಚಾಯತ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉಳ್ಳಾಲ ತಾಲೂಕು ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ಲಾಸ್ಟಿಕ್ ಹಾವಳಿ ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ದಿನದಿಂದ ದಿನಕ್ಕೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಪ್ರಾಣಿ, ಪಕ್ಷಿ ಸಂಕುಲಗಳ ಜೊತೆಗೆ ಇಡೀ ಮಾನವ ಸಂಕುಲ ಅಪಾಯದಲ್ಲಿದೆ ಎಂದು ಶೈಲಾ ಹೇಳಿದರು.

ಪ್ರಸ್ತುತ ಕಾಲಘಟ್ಟ ಪ್ಲಾಸ್ಟಿಕ್ ಸಮಸ್ಯೆ ಸವಾಲಾಗಿ ಪರಿಣಮಿಸಿದೆ. ನಾವು ಜಾಗೃತರಾಗದೆ ಪ್ಲಾಸ್ಟಿಕ್ ಪಿಡುಗನ್ನು ದೂರಗೊಳಿಸಲು ಸಾಧ್ಯವಿಲ್ಲ. ಪತ್ರಕರ್ತರ ಸಂಘ ಆರಂಭಿಸಿರುವ ಈ ವಿನೂತನ ಯೋಜನೆಗೆ ನಾವೆಲ್ಲರೂ ಬೆಂಬಲಿಸುವ ಮೂಲಕ ಇಂತಹ ಕಾರ್ಯಗಳಲ್ಲಿ ಹೆಚ್ಷೆಚ್ಷು ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಆರೋಗ್ಯಪೂರ್ಣ ಸಮಾಜವನ್ನು ಕಟ್ಟೋಣ ಎಂದರು. ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದಲ್ಲಿ ಆರಂಭಗೊಂಡಿರುವ ಈ ಅಭಿಯಾನ ಮುಂದಿನ ದಿನಗಳಲ್ಲಿ 17 ಗ್ರಾಮಗಳಲ್ಲೂ ನಡೆಯವಂತಾಗಲಿ ಹಾಗೂ ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಮಾದರಿ ಕಾರ್ಯಕ್ರಮ ಉಳ್ಳಾಲ ತಾಲೂಕಿನಾದ್ಯಂತ ಈ ರೀತಿಯ ಜಾಗೃತಿ ಕಾರ್ಯಕ್ರಮದ ಅಗತ್ಯವಿದೆ ಎಂದರು.

ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ಪ್ಲಾಸ್ಟಿಕ್ ತ್ಯಾಜ್ಯ ದ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ತರುವವರಿಗೆ ಅಕ್ಕಿ ನೀಡುವ ಮೂಲಕ ಸಾಂಕೇತಿಕವಾದ ಜಾಗೃತಿ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಹರೇಕಳದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ ಈ ಜಾಗೃತಿ ಸಮಗ್ರ ಪಂಚಾಯತ್ ನಲ್ಲಿ ನಿರಂತರವಾಗಿ ಮುಂದುವರಿಯಬೇಕು ಎಂದರು.

ದ.ಕ ಜಿಲ್ಲಾ ಸ್ವಚ್ಛತಾ ರಾಯಭಾರಿಮತ್ತು ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ ಯವರು ಮಾತನಾಡುತ್ತಾ, ಹರೇಕಳ ಗ್ರಾಮ ಪಂಚಾಯತ್ ನ್ನು ಕಸ ಮುಕ್ತ ಮಾದರಿ ಪಂಚಾಯತ್ ಆಗಿಮಾಡುವ ಸಂಕಲ್ಪ ಮಾಡಲಾಗಿದ್ದು ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕಾಗಿದೆ ಎಂದರು.

ಮುಡಿಪು ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಕೃಷ್ಣ ಮೂಲ್ಯ ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ್ದರು. ಹರೇಕಳ ಗ್ರಾಮ ಪಂಚಾಯತ್ ಆಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಅಬ್ದುಲ್ ಮಜೀದ್ , ನಿಕಟ ಪೂರ್ವ ಅಧ್ಯಕ್ಷ ಬದ್ರುದ್ದೀನ್,ಮಾಜಿ ಅಧ್ಯಕ್ಷೆ ಅನಿತಾ,ಶಿವಾಸ್ ಕಾಲೇಜ್ ಪ್ರಾಂಶುಪಾಲರಾದ ಲವಿನಾ ಸೋನ್ಸ್ , ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಆಧ್ಯಕ್ಷ ವಸಂತ ಕೊಣಾಜೆ, ಮುಡಿಪು ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಕೃಷ್ಣ ಮೂಲ್ಯ ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ್ದರು.

ಹರೇಕಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾದ ಭಾಸ್ಕರ ರೈಕಟ್ಟ,ಅನ್ಸಾರ್ ಇನೋಳಿ, ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕಾರ್ಯ ಕಾರಿ ಸಮಿತಿ ಸದಸ್ಯರಾದ ರಾಜೇಶ್ ದಡ್ಡಂಗಡಿ,ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ ಪೊಯ್ಯತ್ತಬೈಲ್, ಮೊದಲಾದವರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News