ಬೆಳ್ತಂಗಡಿ: ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ದಾಳಿ: 3,200ಕ್ಕೂ ಅಧಿಕ ಗಿಡಗಳು ಧ್ವಂಸ

Update: 2023-09-24 03:56 GMT

ಬೆಳ್ತಂಗಡಿ, ಸೆ.24: ಮುಂಡಾಜೆಯ ಕಾಪುವಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ನುಗ್ಗಿ ನರ್ಸರಿ ಗಿಡಗಳಿಗೆ ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ.

ಇಲ್ಲಿ ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಬೆಳೆಸಲಾಗಿದ್ದ ಹಲಸು, ಬಿದಿರು, ಗಾಳಿ, ಹೆಬ್ಬಲಸು, ಬಲಿಂದ್ರ ಪಾಲೆ ಜಾತಿಯ ಸುಮಾರು 3,200ಕ್ಕಿಂತ ಅಧಿಕ ಗಿಡಗಳನ್ನು ಆನೆಗಳು ತುಳಿದು ಸಂಪೂರ್ಣ ಧ್ವoಸಗೊಳಿಸಿವೆ.

ಒಂದು ಮರಿಯಾನೆ ಸಹಿತ ಎರಡು ಆನೆಗಳು ದಾಳಿ ಇಟ್ಟಿರಬಹುದೆಂದು ಶಂಕಿಸಲಾಗಿದೆ. ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನೇರ್ತನೆಯಲ್ಲಿ ಕಂಡುಬಂದಿದ್ದ ಕಾಡಾನೆಗಳು ಇಲ್ಲಿಯೂ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಕಳೆದ ವರ್ಷವೂ ಈ ನರ್ಸರಿಗೆ ಕಾಡಾನೆಗಳು ದಾಳಿ ಇಟ್ಟು ಸಾವಿರಾರು ಗಿಡ ಹಾಗೂ ನರ್ಸರಿ ಸೊತ್ತುಗಳಿಗೆ ಹಾನಿ ಉಂಟು ಮಾಡಿದ್ದವು.

ಅರಣ್ಯ ಇಲಾಖೆಯ ಈ ನರ್ಸರಿ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 20 ಮೀ. ಅಂತರದಲ್ಲಿದೆ. ಆನೆಗಳು ಹೆದ್ದಾರಿ ಬದಿಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ.

ಕಳೆದ ಸುಮಾರು ಹದಿನೈದು ದಿನಗಳಿಂದ ತಾಲೂಕಿನ ಒಂದಲ್ಲ ಒಂದು ಕಡೆ ಕಾಡಾನೆಗಳ ಉಪಟಳ ನಿರಂತರವಾಗಿ ನಡೆಯುತ್ತಿದೆ. ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿಗಳು ಭೇಟಿ ನೋಡಿ ಪರಿಶೀಲನೆ ನಡೆಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News