ಶಾಸಕರ ವಿರುದ್ಧದ ಕೇಸು ಬೇಷರತ್ ಆಗಿ ಹಿಂಪಡೆಯದಿದ್ದಲ್ಲಿ ಬೀದಿಗಿಳಿದು ಹೋರಾಟ: ನಳಿನ್ ಕುಮಾರ್ ಎಚ್ಚರಿಕೆ

Update: 2024-02-15 10:59 GMT

ಮಂಗಳೂರು, ಫೆ.15: ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಧರ್ಮ ಅವಹೇಳನ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶಾಸಕರು, ಪಾಲಿಕೆ ಸದಸ್ಯರು ಹಾಗೂ ಸಂಘ ಪರಿವಾರದ ಸಂಘಟನೆ ಮುಖಂಡರ ವಿರುದ್ಧ ಕೇಸು

ದಾಖಲಿಸಿರುವುದನ್ನು ಬೇಷರತ್ ಆಗಿ ವಾಪಸ್ ಪಡೆಯಬೇಕು. ವಿನಾ ಕಾರಣ ಜಾರಿಗೊಳಿಸಿದ ಶಿಕ್ಷಣ ಇಲಾಖೆ ಅಧಿಕಾರಿಯ ವರ್ಗಾವಣೆ ರದ್ದುಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಗುರುವಾರ ದ.ಕ. ಲೋಕಸಭಾ ಚುನಾವಣಾ ಕಚೇರಿ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ನಮ್ಮ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಸಂಘ ಪರಿವಾರದ ಮುಖಂಡರ ವಿರುದ್ಧ ಕೇಸು ದಾಖಲಿಸಿರುವುದನ್ನು ಹಿಂಪಡೆಯಿರಿ ಎಂದು ನಾವು ಕಾಂಗ್ರೆಸ್ ಎದುರು ಭಿಕ್ಷೆ ಬೇಡುವುದಿಲ್ಲ. ಅದನ್ನು ಸಾರ್ವಜನಿಕವಾಗಿ ಹೋರಾಟ ನಡೆಸುವ ಮೂಲಕ ಎದುರಿಸುತ್ತೇವೆ ಎಂದರು.

ಈ ಹಿಂದೆ ಬಾವುಟಗುಡ್ಡೆಯಲ್ಲಿ ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಗೆ ಹೆಸರಿಡುವ ವಿಚಾರದಲ್ಲಿ ಕಾಂಗ್ರೆಸ್ ನವರು ಅಲೋಶಿಯಸ್ ಶಾಲಾ ವಿದ್ಯಾರ್ಥಿಗಳನ್ನು ಕೂರಿಸಿ ಪ್ರತಿಭಟನೆ ನಡೆಸಿದ್ದರು. ಆಗ ಶಾಸಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರೂ ಯಾವ ಕೇಸು ದಾಖಲಾಗಿರಲಿಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದು ನಳಿನ್ ಹೇಳಿದರು.

ಜನಪ್ರತಿನಿಧಿಗಳ ವಿರುದ್ಧ ಕೇಸು ದಾಖಲಿಸುವ ಮೂಲಕ ಕಾಂಗ್ರೆಸ್ ಮತ ಬ್ಯಾಂಕ್ ಗಾಗಿ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ರಾಮನ ವಿರುದ್ಧ ಮಾತನಾಡಿದವರ ಮೇಲೆ ಕ್ರಮ ಕೈಗೊಳ್ಳದೆ, ಮಕ್ಕಳಲ್ಲಿ ಕೋಮುಭಾವನೆ ಕೆರಳಿಸಿದ ವೃಥಾ ಆರೋಪ ಹೊರಿಸುತ್ತಿದೆ ಎಂದರು. 

ಮಂಗಳೂರಿನ ಖಾಸಗಿ ಶಾಲೆಯಲ್ಲಿ ನಡೆದಿರುವುದು ಬಿಜೆಪಿ ವರ್ಸಸ್ ಕಾಂಗ್ರೆಸ್ ಅಲ್ಲ, ಹಿಂದು-ಕ್ರೈಸ್ತ ನಡುವಿನ ಕೋಮು ಭಾವನೆಯ ಹೋರಾಟವೂ ಅಲ್ಲ. ಹಿಂದು ದೇವರ ನಿಂದನೆಗೆ ಶಿಕ್ಷಕಿ ವಿರುದ್ಧ ಪೋಷಕರು, ಹೆತ್ತವರು ನಡೆಸಿದ ಹೋರಾಟಕ್ಕೆ ಶಾಸಕರು ಬೆಂಗಾವಲಾಗಿ ಹೋಗಿದ್ದಾರೆ ಅಷ್ಟೆ. ರಾಮ ವಿರೋಧಿ ಶಿಕ್ಷಕಿಯ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ನಳಿನ್ ಆಗ್ರಹಿಸಿದರು.

ಶಾಲೆಯಲ್ಲಿ ಬಿಜೆಪಿ ರಾಜಕೀಯಕ್ಕೆ ಮಕ್ಕಳನ್ನು ಬಳಸಿಲ್ಲ. ಅದು ಬಿಜೆಪಿ ಅಥವಾ ಹಿಂದುತ್ವ ಸಂಘಟನೆಗಳು ಕೈಗೆತ್ತಿಕೊಂಡ ಹೋರಾಟ ಅಲ್ಲ. ಪೋಷಕರು ಹಾಗೂ ಹೆತ್ತವರು ಹೋರಾಟ ನಡೆಸಿದ್ದು, ನಾನೂ ಇದ್ದರೆ ಅದರಲ್ಲಿ ಭಾಗವಹಿಸುತ್ತಿದ್ದೆ. ಶಾಸಕರು ಅಲ್ಲಿಂದಲೇ ಅಧಿಕಾರಿಗಳು, ಸರಕಾರದ ಜತೆ ಮಾತನಾಡಿದ್ದಾರೆ. ರಾಮನ ಅವಹೇಳನ ಮಾಡುವುದನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಕಾನೂನಾತ್ಮಕ ಹಾಗೂ ಬೀದಿಗಿಳಿದು ಹೋರಾಟ ನಡೆಸುವುದಾಗಿ ನಳಿನ್ ಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News