ಮುಕ್ಕ: ಆಕಸ್ಮಿಕವಾಗಿ ರಸ್ತೆಗೆ ಬಿದ್ದ ವೇಳೆ ವಾಹನ ಹರಿದು ಯುವಕ ಮೃತ್ಯು

Update: 2024-01-19 04:34 GMT

ಸುರತ್ಕಲ್, ಜ.19: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ರಸ್ತೆಗೆ ಬಿದ್ದ ಯುವಕನೋರ್ವನ ಮೇಲೆ ವಾಹನ ಹರಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಮುಕ್ಕ ಚೆಕ್ ಪೋಸ್ಟ್ ಬಳಿಯ ಪಪ್ಪಿಲೊನ್ ಹೋಟೆಲ್ ಮುಂಭಾಗದಲ್ಲಿ ಗುರುವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಮೃತರನ್ನು ಉತ್ತರ ಪ್ರದೇಶದ ಬಿಸೌಲಿ ಬುದೌನ್ ನಿವಾಸಿ ಆಲಂ ಎಂದು ಗುರುತಿಸಲಾಗಿದೆ.

ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಲಂ ಆಕಸ್ಮಿಕವಾಗಿ ಬಿದ್ದಿದ್ದು, ಈ ಸಂದರ್ಭ ಯಾವುದೋ ವಾಹನ ಅವರಿಗೆ ಢಿಕ್ಕಿಹೊಡೆದು ಪರಾರಿಯಾಗಿದೆ ಎಂದ ಹೇಳಲಾಗುತ್ತಿದೆ.

ಘಟನೆಯಿಂದ ಆಲಂ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿತ್ತು. ಬಳಿಕ ಪಪ್ಪಿಲೋನ್ ಹೋಟೆಲ್ ಸಿಬ್ಬಂದಿ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಗೀತಾ ಡಿ. ಕುಲಕರ್ಣಿ, ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶರೀಫ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News