ಮಕ್ಕಳ ಮೊಬೈಲ್ ಬಳಕೆಯ ಮೇಲೆ ಪೋಷಕರ ನಿಗಾ ಅಗತ್ಯ : ಎಸ್ ಐ ಅಶೋಕ್
ಉಳ್ಳಾಲ: ಮಕ್ಕಳ ಅತಿಯಾದ ಮೊಬೈಲ್ ಬಳಕೆ ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಾ ಇದ್ದು, ಈ ಕುರಿತು ಪೋಷಕರ ನಿಗಾ ಅಗತ್ಯ ಎಂದು ಕೊಣಾಜೆ ಪೊಲೀಸ್ ಠಾಣೆ ಉಪ ನಿರೀಕ್ಷಕ ಎಸ್ ಐ ಅಶೋಕ್ ಕರೆ ನೀಡಿದ್ದಾರೆ.
ದೇರಳಕಟ್ಟೆ ಉರುಮನೆ ಅಲಿಫ್ ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ನಡೆದ ಶಿಕ್ಷಕ ರಕ್ಷಕ ಸಂಘದ ಸಭೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪೋಷಕರು ಕಲಿಕೆಗೆ ಪೂರಕವಾಗಿ ವಾತಾವರಣ ರೂಪಿಸಬೇಕು. ಶಿಕ್ಷಣಕ್ಕೆ ಅಗತ್ಯವಾದ ಪರಿಸರವನ್ನು ಮಕ್ಕಳಿಗೆ ಸೃಷ್ಟಿಸಿಕೊಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥೆಯ ಅಧ್ಯಕ್ಷ ಎ.ಬಿ.ಹುಸೇನ್ ಮಾತನಾಡಿ, ಮಕ್ಕಳು ಸಮಯ ಪಾಲನೆ ಮಾಡುವಂತೆ ಪೋಷಕರು ಎಚ್ಚರಿಸುತ್ತಾ ಇರಬೇಕು ಮತ್ತು ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಮುಂದಿನ ಶೈಕ್ಷಣಿಕ ವರ್ಷ ಶಾಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕಂಪ್ಯೂಟರ್, ಗ್ರಂಥಾಲಯ ಅಭಿವೃದ್ಧಿ, ಓದುವ, ಬರೆಯುವ ಅಭಿಯಾನ ಮಾಡಲಾಗುವುದು ಎಂದು ವಿವರಿಸಿದರು.
ಸಂಸ್ಥೆಯ ಭಾವಿ ಪ್ರಾಂಶುಪಾಲೆ ಆಯಿಷಾ ಸಬೀನ ಕೈಸರೀನ ಮಾತನಾಡಿದರು. ಸಂಸ್ಥೆಯ ವ್ಯವಸ್ಥಾಪಕ ಸಲೀಂ ಪಾಲ್ಗೊಂಡರು. ಮುಖ್ಯ ಅತಿಥಿ ಎಸ್ ಐ ಅಶೋಕ್ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಶಿಕ್ಷಕಿ ಲುಬ್ನಾ ಸ್ವಾಗತಿಸಿದರು. ಆರಿಫಾ ವಂದಿಸಿದರು. ನಿಶಾ ಉಮರ್ ನಿರೂಪಿಸಿದರು.