ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು, ಸಂಘಟನೆಗಳ ಜಂಟಿ ನಿಯೋಗದಿಂದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Update: 2024-06-10 13:25 GMT

ಮಂಗಳೂರು : ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗ ಇಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮುವಾದಿ ಚಟುವಟಿಕೆಗಳ ನಿಯಂತ್ರಿಸಲು ಕಠಿಣ ಕ್ರಮಗಳಿಗಾಗಿ ಆಗ್ರಹಿಸಿತು, ಮನವಿ ಸಲ್ಲಿಸಿತು.

ಬಲಪಂಥೀಯ ಸಂಘಟನೆಗಳ ಪ್ರಮುಖರ ಮೇಲೆ (ಉದಾ: ಶರಣ್ ಪಂಪ್ ವೆಲ್ ಪ್ರಕರಣ) ಮಂಗಳೂರು ಪೊಲೀಸರು ಹೂಡುವ ಮೊಕದ್ದಮೆಗಳಿಗೆ ಹೈ ಕೋರ್ಟ್ ನಲ್ಲಿ ತಡೆಯಾಜ್ಞೆ ಸಿಗುತ್ತಿರುವ ಸರಣಿ ಪ್ರಕರಣಗಳು ವರದಿಯಾಗುತ್ತಿರು ವುದನ್ನು ನಿಯೋಗ ಸಚಿವರ ಮುಂದಿಟ್ಟಿತು. ಪೊಲೀಸರು ಸರಿಯಾದ ಸೆಕ್ಷನ್ ಗಳನ್ನು ಹಾಕದಿರುವುದು, ಹೈಕೋರ್ಟ್ ನಲ್ಲಿ ಸರಕಾರದ ಪರವಾಗಿರುವ ವಕೀಲರುಗಳು ಇಂತಹ ಪ್ರಕರಣಗಳ ಅರ್ಜಿಗಳು ಬಂದಾಗ ಗಂಭೀರವಾಗಿ ಆಕ್ಷೇಪ ಸಲ್ಲಿಸದಿರುವ ಕುರಿತು ಸಚಿವರ ಗಮನ ಸೆಳೆಯಿತು.

ಚುನಾವಣೋತ್ತರ ಸಂಭ್ರಮಾಚರಣೆಯ ಹೆಸರಿನಲ್ಲಿ ಮುಸ್ಲಿಮರು, ಅವರ ಮಸೀದಿಗಳನ್ನು ಗುರಿಯಾಗಿಸಿ ಪ್ರಚೋದನಾ ಕಾರಿ ಕ್ರಿಯೆಗಳನ್ನು ಬಿಜೆಪಿ ಬೆಂಬಲಿಗರು ನಡೆಸುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು, ಪೊಲೀಸರು ಕೋಮು ಗಲಭೆಗಳಿಗೆ ಷಡ್ಯಂತ್ರದ ಈ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದನ್ನು ಖಾತರಿ ಪಡಿಸುವಂತೆ ಒತ್ತಾಯಿ ಲಾಯಿತು. ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ, ಇಸ್ಪೀಟು, ಮಟ್ಕಾ ದಂಧೆ, ಮಸಾಜ್ ಪಾರ್ಲರ್, ಬೆಟ್ಟಿಂಗ್ ದಂಧೆಗಳಿಗೆ ಪೊಲೀಸರ ಸಹಕಾರ ಇರುವ ಕುರಿತು ನಿಯೋಗ ಉಸ್ತುವಾರಿ ಸಚಿವರ ಗಮನ ಸೆಳೆಯಿತು. ಇಂತಹ ಅಕ್ರಮ ದಂಧೆಗಳು ಕೋಮುವಾದಿ ಶಕ್ತಿಗಳ ಸಖ್ಯತೆ ಹೊಂದಿರುವುದನ್ನು ಸಚಿವರಿಗೆ ಮನದಟ್ಟು ಮಾಡಲಾಯಿತು. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಸಹಿತ ದಂಧೆಗಳು ನಿಯಂತ್ರಣಲ್ಲಿರುವುದು, ಕಮಿಷನರೇಟ್ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವುದು ನಿಯೋಗದಲ್ಲಿದ್ದ ಬಹುತೇಕರು ಒಕ್ಕೊರಲಿನಿಂದ ಸಚಿವರ ಮುಂದೆ ವ್ಯಕ್ತಪಡಿಸಿದರು.

ಅದೇ ಸಂದರ್ಭ, ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದ ಸಂದರ್ಭ ದಾಖಲಿಸಲಾಗಿದ್ದ ಎಫ್ಐಆರ್ ಒಂದಕ್ಕೆ ಈ ಸರಕಾರದ ಅವಧಿಯಲ್ಲಿ ಸುರತ್ಕಲ್ ಪೊಲೀಸರು ನೂರಾ ಒಂದು ಜನ ಹೋರಾಟಗಾರರ ಮೇಲೆ ಆರೋಪಪಟ್ಟಿ ಸಲ್ಲಿಸಿದ್ದು, ಈ ಮೊಕದ್ದಮೆಯನ್ನು ರಾಜ್ಯ ಸರಕಾರ ಕೈ ಬಿಡಬೇಕು ಎಂದು ಮನವಿ ಸಲ್ಲಿಸಿ ವಿನಂತಿಸಲಾಯಿತು.

ಈ ಎಲ್ಲಾ ವಿಚಾರಗಳನ್ನು ಆಲಿಸಿ ಸಚಿವ ದಿನೇಶ್ ಗುಂಡೂರಾವ್ ಅವರು ಕೋಮುಶಕ್ತಿಗಳು ಹಾಗೂ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ಕುರಿತು ಸ್ಪಷ್ಟ ಕ್ರಮಗಳನ್ನು ಜರುಗಿಸುವುದಾಗಿ ಭರವಸೆ ನೀಡಿದರು‌. ಮುಂದಕ್ಕೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಪರಿಹಾರೋಪಾಯಗಳನ್ನು ಕಂಡು ಹಿಡಿಯಲು ಯತ್ನಿಸುವುದಾಗಿ ತಿಳಿಸಿದರು. ಟೋಲ್ ಗೇಟ್ ತೆರವು ಹೋರಾಟದ ಸಂದರ್ಭ ಹೋರಾಟಗಾರರ ಮೇಲೆ ಹೂಡಲಾ ಗಿರುವ ಮೊಕದ್ದಮೆಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಸಚಿವರೊಂದಿಗೆ ಪುತ್ತೂರು ಶಾಸಕ ಅಶೋಕ್ ರೈ ಉಪಸ್ಥಿತರಿದ್ದರು.

ನಿಯೋಗದಲ್ಲಿ ಜಂಟಿ ಸಮಿತಿಯ ಅಧ್ಯಕ್ಷರು, ಮಾಜಿ ಸಚಿವರಾದ ಬಿ ರಮಾನಾಥ ರೈ, ಪ್ರಧಾನ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಹಿರಿಯ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಮಾಜಿ ಮೇಯರ್ ಗಳಾದ ಕೆ ಅಶ್ರಫ್, ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸಾಮರಸ್ಯದ ಮಂಜುಳಾ ನಾಯಕ್, ಹಿರಿಯ ಕಾರ್ಮಿಕ ನಾಯಕ ವಿ ಕುಕ್ಯಾನ್, ಶಾಹುಲ್ ಹಮೀದ್, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮೂಸಬ್ಬ ಪಕ್ಷಿಕೆರೆ, ಮಾಜಿ ಕಾರ್ಪೊರೇಟರ್ ಅಯಾಜ್, ಸಾಮಾಜಿಕ ಕಾರ್ಯಕರ್ತರಾದ ಸಮರ್ಥ್ ಭಟ್, ಶಬ್ಬೀರ್ ಸಿದ್ದಕಟ್ಟೆ, ಸತೀಶ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು ಎಂದು ಮುನೀರ್ ಕಾಟಿಪಳ್ಳ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News