ಪುತ್ತೂರು: ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
Update: 2024-10-24 16:50 GMT
ಪುತ್ತೂರು: ಸೆಂಟ್ರಿಂಗ್ ಕಾರ್ಮಿಕರೋರ್ವರ ಮೃತದೇಹ ಪುತ್ತೂರಿನ ರೈಲು ಹಳಿಯಲ್ಲಿ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ. ರೈಲ್ವೆ ಹಳಿ ದಾಟುವ ವೇಳೆಯಲ್ಲಿ ರೈಲು ಢಿಕ್ಕಿಯಾಗಿ ಮೃತ ಪಟ್ಟಿರುವುದಾಗಿ ಶಂಕಿಸಲಾಗಿದೆ.
ಪೆರ್ಲ ಉಕ್ಕಿನಡ್ಕ ಸಮೀಪದ ಸರ್ಪಂಗಳ ನಿವಾಸಿ ತಿಮ್ಮ ನಾಯ್ಕ ಎಂಬವರ ಪುತ್ರ ಚನಿಯಪ್ಪ ಯಾನೆ ರಾಧಾಕೃಷ್ಣ ನಾಯ್ಕ (46) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸೆಂಟ್ರಿಂಗ್ ಕಾರ್ಮಿಕರಾದ ಇವರು ಪುತ್ತೂರು ಸಮೀಪದ ಕಬಕ ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ವಾರಕ್ಕೊಮ್ಮೆ ಊರಿಗೆ ಹೋಗಿ ಬರುತ್ತಿದ್ದರು. ಬುಧವಾರ ಬೆಳಗ್ಗೆ ತನ್ನ ಮನೆಯಿಂದ ತೆರಳಿದ್ದರು ಎನ್ನಲಾಗಿದೆ. ಕಬಕ ಸ್ಟೇಶನ್ ವ್ಯಾಪ್ತಿಯ ರೈಲು ಹಳಿಯಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದ್ದು ಬುಧವಾರ ರಾತ್ರಿ ಹಳಿ ದಾಟುವಾಗ ರೈಲು ಢಿಕ್ಕಿಯಾಗಿರಬೇಕೆಂದು ಸಂಶಯಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.