ಮೂಡುಬಿದಿರೆ: ಸರಕಳ್ಳತನ ಪ್ರಕರಣ; ಆರೋಪಿಯ ಬಂಧನ

ಮಂಗಳೂರು, ಎ.8: ಮೂಡುಬಿದಿರೆಯ ಬೆಳುವಾಯಿಯಲ್ಲಿ ಮಾ.31ರಂದು ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಕರಿಮಣ ಸರ ಕಳವುಗೈದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಕಾಂತಾವರದ ಕಂದಿಲ ನಿವಾಸಿ ಆರೋಪಿ ಪ್ರಶಾಂತ್ ಸಾಲಿಯನ್ ಯಾನೆ ಪಚ್ಚು (34) ಬಂಧಿತ ಆರೋಪಿ.
ಆರೋಪಿ ಕೈಯಿಂದ ಚಿನ್ನದ ಮಾಂಗಲ್ಯ ಕರಿಮಣಿ ಸರ ಹಾಗೂ ಚಿನ್ನದ ಸರದ ಒಂದು ತುಂಡು ಸ್ವಾಧೀನಪಡಿಸಿಕೊಂಡಿದ್ದು ಹಾಗೂ ಆರೋಪಿಯು ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕೈಯಿಂದ ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 3,30,000 ರೂ. ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳುವಾಯಿ ಗ್ರಾಮದ ಗುಜ್ಜರ ಗುಂಡಿ ಎಂಬಲ್ಲಿ ಮಾ.31ರಂದು 70 ಹರೆಯದ ಇಂದಿರಾ ಎಂಬದರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಕೆಂಪು ಬಣ್ಣದ ಮೋಟಾರು ಸೈಕಲಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಓರ್ವ ಕಸಿದುಕೊಂಡು ಹೋದ ಬಗ್ಗೆ, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರಶಾಂತ್ ಸಾಲಯಾನ್ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ, ಆರೋಪಿಯು ತಾನು ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡಿರುವುದನ್ನು ಒಪ್ಪಿಕೊಂಡಿದ್ದಾನೆ ಅಲ್ಲದೆ 2024 , ಡಿ.2ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕಾಂತಾವರ ಅಂಬರೀಶ್ ಗುಹೆ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಸಿದುಕೊಂಡಿರುವ ಬಗ್ಗೆ ಆರೋಪಿ ಮಾಹಿತಿ ನೀಡಿದ್ದಾನೆ.
ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡದಲ್ಲಿ ಪಿಎಸ್ಐ ಗಳಾದ ಕೃಷ್ಣಪ್ಪ ಮತ್ತು ಪ್ರತಿಭ ಕೆ.ಸಿ, ಹಾಗೂ ಎಎಸ್ಐ ರಾಜೇಶ್ ಮತ್ತು ಎಚ್.ಸಿ ಗಳಾದ ರಾಜೇಶ್, ಮುಹಮ್ಮದ್ ಇಕ್ಬಾಲ್ , ಪ್ರದೀಪ್ ಕುಮಾರ್ ಬಣಗರ್, ಮುಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್ ಲಮಾಣಿ ಮತ್ತು ಪಿ.ಸಿ ವೆಂಕಟೇಶ್ ಪಾಲ್ಗೊಂಡಿದ್ದರು.