ಉಪ್ಪಿನಂಗಡಿ, ನೆಕ್ಕಿಲಾಡಿಯಲ್ಲಿ ಸರಣಿ ಕಳ್ಳತನ

Update: 2023-11-04 06:43 GMT

ಉಪ್ಪಿನಂಗಡಿ, ನ.4: ಉಪ್ಪಿನಂಗಡಿ ಹಾಗೂ 34 ನೆಕ್ಕಿಲಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಂಗಡಿ, ಪೆಟ್ರೋಲ್ ಬಂಕ್ ಗಳಲ್ಲಿ ಸರಣಿ ಕಳ್ಳತನ ನಡೆದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಗಾಂಧಿ ಪಾರ್ಕ್ ಬಳಿ ಜಗದೀಶ್ ನಾಯಕ್ ಎಂಬವರಿಗೆ ಸೇರಿದ ಟೈಲ್ಸ್ ಅಂಗಡಿಯ ಶಟರ್ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕ್ಯಾಶ್ ಡ್ರಾವರ್ ನಲ್ಲಿದ್ದ ಸುಮಾರು 20 ಸಾವಿರ ರೂ. ನಗದನ್ನು ಕದ್ದೊಯ್ದಿದ್ದಾರೆ. ಅಲ್ಲೇ ಪಕ್ಕದ ಗುಜಿರಿ ಅಂಗಡಿಗೂ ನುಗ್ಗಿದ ಕಳ್ಳರು ತಾಮ್ರದ ಬೆಲೆ ಬಾಳುವ ಸೊತ್ತುಗಳನ್ನು ಕಳವುಗೈದಿದ್ದಾರೆ. ಪಕ್ಕದ ಹೊಟೇಲೊಂದಕ್ಕೂ ನುಗ್ಗಿ ಅಲ್ಲಿಂದಲೂ ಹಣವನ್ನು ಕದ್ದೊಯ್ದಿದ್ದಾರೆ.

ಅದೇರೀತಿ 34 ನೆಕ್ಕಿಲಾಡಿಯ ಭಾರತ್ ಪೆಟ್ರೋಲ್ ಬಂಕ್ ಗೆ ನುಗ್ಗಿದ ಕಳ್ಳರು ಅಲ್ಲಿನ ಕ್ಯಾಶ್ ಡ್ರಾವರ್ ತೆರದು ಕಳವುಗೈದಿದ್ದಾರೆ. 34 ನೆಕ್ಕಿಲಾಡಿಯ ರವೀಂದ್ರ ಪ್ರಭು ಎಂಬವರಿಗೆ ಸೇರಿದ ಬೊಳ್ಳಾರ್ ಬಳಿಯಿರುವ ವೃಂದಾ ವೈಭವ್ ಗ್ಯಾಸ್ ಫಿಲ್ಲಿಂಗ್ ಸೆಂಟರ್ ನ ಎರಡು ಗಾಜಿನ ಬಾಗಿಲನ್ನು ಒಡೆದು ಒಳನುಗ್ಗಿದ್ದಾರೆ. ಒಡೆದು ಹಾಕಿದ ಗಾಜಿನ ಬಾಗಿಲಿನ ಮೌಲ್ಯ ಸುಮಾರು ಎರಡು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅಲ್ಲಿಂದ ದೇವರ ಮಂಟಪದಲ್ಲಿದ್ದ ಬೆಳ್ಳಿಯ ಚೆಂಬು, ನಗದನ್ನು ಕದ್ದೊಯ್ದಿದ್ದಾರೆ.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಂಗಡಿಗಳನ್ನಷ್ಟೇ ಕಳ್ಳರು ಟಾರ್ಗೆಟ್ ಮಾಡಿದ್ದು, ಹಲವು ಅಂಗಡಿಗಳಲ್ಲಿ ಕಳ್ಳತನ ನಡೆಸಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News