ಸುಳ್ಯ : ಪರವಾನಗಿ ಇಲ್ಲದೆ ನಾಡ ಕೋವಿ ಹೊಂದಿದ್ದ ಪ್ರಕರಣ; ಆರೋಪಿಗೆ ಜೈಲು ಶಿಕ್ಷೆ, ದಂಡ

Update: 2023-11-22 16:45 GMT

ಸುಳ್ಯ : ಪರವಾನಗಿ ಇಲ್ಲದೆ ನಾಡಕೋವಿ ಹೊಂದಿದ್ದ ಪ್ರಕರಣದ ಆರೋಪದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ಸುಳ್ಯ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.

2013ರಲ್ಲಿ ಕಣ್ಣೂರು ಜಿಲ್ಲೆಯ ಎಂ.ಕೆ. ಅಜಿತ್ ಎಂಬಾತ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಬಟ್ಟಂಗಾಯ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಇರುವ ಮನೆಯ ಅಂಗಳಕ್ಕೆ ಪರವಾನಿಗೆ ಇಲ್ಲದ ನಾಡ ಕೋವಿ, ಗನ್ ಪೌಡರ್ ಹಾಗೂ 2 ಕಬ್ಬಿಣದ ಕಡ್ಡಿಗಳನ್ನು ತಂದಿದ್ದು, ಈ ವಿಚಾರ ಪೊಲೀಸರಿಗೆ ತಿಳಿದು ಆರೋಪಿಯ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕೇಸಿನ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದಿದ್ದು, ಅಪರಾಧ ಸಾಬೀತಾಗಿದೆ. ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಬಿ.ಮೋಹನ್ ಬಾಬು ಅವರು ಅಪರಾಧಿಗೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಕಲಂ 3(1), 25 ಯಡಿಯಲ್ಲಿ 2 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 10,000 ದಂಡ ಪಾವತಿಯ ಶಿಕ್ಷೆ ವಿಧಿಸಿ ಆದೇಶ ಮಾಡಿದ್ದಾರೆ.

ಸರಕಾರದ ಪರವಾಗಿ ಸುಳ್ಯದ ಸಹಾಯಕ ಸರಕಾರಿ ಅಭಿಯೋಜಕರು ಪ್ರಕರಣ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News