ಸುಳ್ಯ: ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2023-07-17 17:18 GMT

ಸುಳ್ಯ: ಕನಕಮಜಲು ಮತ್ತು ಜಾಲ್ಸೂರು ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ನಡೆದಿದ್ದು ಅಪಾರ ಚಿನ್ನಾಭರಣ ಸಹಿತ ನಗದು ಕಳವುಗೈದ ಘಟನೆ ರವಿವಾರ ರಾತ್ರಿ ನಡೆದಿದೆ.

ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ಕುಮಾರ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳರು ನುಗ್ಗಿ ಸುಮಾರು 30 ಪವನ್ ಚಿನ್ನಾಭರಣ ಕಳವು ಮಾಡಿದ್ದಾರೆ. ಯುರೇಶ್ ಅವರ ಚಿಕ್ಕಮ್ಮ ರವಿವಾರ ಸಂಜೆ ನಿಧನರಾಗಿದ್ದು, ಯುರೇಶ್ ಮತ್ತು ಅವರ ಪತ್ನಿ ಭವಾನಿ ಸಂಜೆ 6 ಗಂಟೆಗೆ ಅವರ ಅಂತ್ಯಕ್ರಿಯೆಗೆ ಹೋಗಿದ್ದರು. ರಾತ್ರಿ 12.30 ಕ್ಕೆ ಮನೆಗೆ ಹಿಂತಿರುಗಿದಾಗ ಕಳ್ಳತನ ನಡೆದಿರುವುದು ಅವರ ಗಮನಕ್ಕೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೊಂದು ಘಟನೆಯಲ್ಲಿ ಅಂಗಡಿಯ ಬೀಗ ಮುರಿದು ನಗದು ಹಾಗೂ ಅಂಗಡಿ ಸಾಮಗ್ರಿಗಳನ್ನು ಕಳವುಗೈದ ಘಟನೆ ನಡೆದಿದೆ. ಜಾಲ್ಸೂರಿನ ಸಿಂಡಿಕೇಟ್ ಬ್ಯಾಂಕ್ ಸಮೀಪವಿರುವ ಜೋಗಿ ಬೈದರಕೊಳಂಜಿ ಎಂಬವರ ಅಂಗಡಿಯ ಬೀಗ ಮುರಿದ ಕಳ್ಳರು ಡ್ರಯರ್ ನಲ್ಲಿದ್ದ ಚಿಲ್ಲರೆ ಹಣ ಸೇರಿದಂತೆ ಸುಮಾರು ಎರಡು ಸಾವಿರ ನಗದು ಹಾಗೂ ಅಂಗಡಿ ಸಾಮಾಗ್ರಿಗಳಾದ ಸೋಪು, ಜ್ಯೂಸ್ ಬಾಟ್ಲಿಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.

ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ಗೂಡಂಗಡಿಯೊಂದಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಮಾರಾಟಕ್ಕಿಟ್ಟಿದ್ದ ಕೊಡೆ ಸೇರಿದಂತೆ ಅಂಗಡಿ ಸಾಮಗ್ರಿಗಳನ್ನು ಕಳವುಗೈದಿದ್ದಾರೆ. ಕೋನಡ್ಕ ಪದವಿನ ಸುಂದರ್ ನಾಯಕ್ ಅವರು ವಿನೋಬನಗರದದಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದು, ಅವರ ಅಂಗಡಿಗೆ ರಾತ್ರಿ ವೇಳೆ ಬೀಗ ಮುರಿದು ನುಗ್ಗಿದ ಕಳ್ಳರು , ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ನಾಲ್ಕು ಕೊಡೆ ಸೇರಿದಂತೆ ಅಂಗಡಿ ಸಾಮಗ್ರಿಗಳನ್ನು ಕಳವುಗೈದಿದ್ದಾರೆ.

ಈ ಸರಣಿ ಕಳ್ಳತನ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News