ಉಜಿರೆ: ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿ; ದೂರು ದಾಖಲು

ಬೆಳ್ತಂಗಡಿ: ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಳ್ಳತನ ಮಾಡಿದ ಘಟನೆ ಉಜಿರೆಯ ಓಡಲ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ರತ್ನ (55) ಎಂಬವರು ಎ.10 ರಂದು ಬೆಳಗ್ಗೆ 6.30 ಗಂಟೆಯ ಸುಮಾರಿಗೆ ಉಜಿರೆ ಓಡಲ ವ್ಯಾಘ್ರ ಚಾಮುಂಡಿ ದ್ವಾರದ ಬಳಿ ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯ ಸಮೀಪ ಬಂದು ಬೈಕ್ ನಿಲ್ಲಿಸಿ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ. ಸರವನ್ನು ಎಳೆದು ತುಂಡರಿಸುವ ವೇಳೆ ಕುತ್ತಿಗೆಗೆ ಗಾಯಗಳಾಗಿವೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳ್ಳತನವಾದ ಚಿನ್ನದ ಸರ 33 ಗ್ರಾಂ ತೂಕದ್ದಾಗಿದ್ದು ಇದರ ಮೌಲ್ಯ ಸುಮಾರು ಒಂದೂವರೆ ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಘಟನೆಯು ಸ್ಥಳೀಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.