ಪ್ರತಿಷ್ಠಿತ ವಿಜ್ಞಾನ ಪ್ರಶಸ್ತಿಗೆ ಹೊಸ ಆಯ್ಕೆ ಪ್ರಕ್ರಿಯೆ: ಕಳವಳ ವ್ಯಕ್ತಪಡಿಸಿ 176 ಶಿಕ್ಷಣ ತಜ್ಞರಿಂದ ಪತ್ರ
ಹೊಸದಿಲ್ಲಿ: ಪ್ರತಿಷ್ಠಿತ ವಿಜ್ಞಾನ ಯುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಗೆ ಹೊಸ ಆಯ್ಕೆ ಮಾನದಂಡಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಿಗೆ 176 ಶಿಕ್ಷಣ ತಜ್ಞರು ಪತ್ರ ಬರೆದಿದ್ದಾರೆ.
ಈ ವರ್ಷದ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ವಿಜ್ಞಾನ ಯುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಗೆ ಆಯ್ಕೆಯ ವೇಳೆ ಲೋಪವಾಗಿದೆ ಎಂದು ಮಾಧ್ಯಮ ವರದಿಗಳು ಸೂಚಿಸಿದ ನಂತರ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುವಲ್ಲಿ ಅನುಸರಿಸಿದ ಕಾರ್ಯವಿಧಾನದ ಬಗ್ಗೆ ಮಾಹಿತಿ ಕೋರಿ 26 ಖ್ಯಾತ ವಿಜ್ಞಾನಿಗಳು ಮುಖ್ಯ ವೈಜ್ಞಾನಿಕ ಸಲಹೆಗಾರರಿಗೆ ಈ ಮೊದಲು ಪತ್ರ ಬರೆದಿದ್ದರು. ಇದೀಗ ಮತ್ತೆ 176 ಶಿಕ್ಷಣ ತಜ್ಞರು ಪತ್ರ ಬರೆದಿದ್ದಾರೆ.
ವಿಜ್ಞಾನ ಯುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಆರು ದಶಕಗಳಿಂದ ಭಾರತದಲ್ಲಿ ಅತ್ಯಂತ ಪ್ರತಿಷ್ಠಿತ ವಿಜ್ಞಾನ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಈ ವರ್ಷ, ತಜ್ಞರ ಸಮಿತಿ ಶಿಫಾರಸು ಮಾಡಿದ ಇಬ್ಬರು ನಿರೀಕ್ಷಿತರ ಹೆಸರನ್ನು ಪ್ರಶಸ್ತಿ ವಿಜೇತರ ಪಟ್ಟಿಯಿಂದ ಕೈಬಿಡಲಾಗಿದೆ. ಅವರಲ್ಲಿ ಒಬ್ಬರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ತೀವ್ರ ಟೀಕಾಕಾರರಾಗಿದ್ದರು.
ಮಂಗಳವಾರ 176 ಶಿಕ್ಷಣ ತಜ್ಞರಿದ್ದ ಗುಂಪು ಕಳವಳಗಳನ್ನು ವ್ಯಕ್ತಪಡಿಸಿ ಈ ಕುರಿತು ಭಾರತ ಸರಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಅಜಯ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಸರ್ಕಾರವು ತನ್ನ ಪೋರ್ಟಲ್ ನಲ್ಲಿ ಆಯ್ಕೆ ಮಾನದಂಡಗಳನ್ನು ನವೀಕರಿಸಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹೊಸ ಮಾನದಂಡದಲ್ಲಿ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಸಮಿತಿಯು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಿಗೆ ತಮ್ಮ ಶಿಫಾರಸ್ಸುಗಳನ್ನು ಸಲ್ಲಿಸುತ್ತದೆ ಎಂದು ಸೇರಿಸಲಾಗಿದೆ. ರಾಷ್ಟ್ರೀಯ ವಿಜ್ಞಾನ ಪುರಸ್ಕಾರಗಳನ್ನು ನಿರ್ಧರಿಸುವ ಕಾರ್ಯವಿಧಾನಗಳು ಮತ್ತು ಮಾನದಂಡಗಳು ಸಂಪೂರ್ಣವಾಗಿ ನ್ಯಾಯೋಚಿತ, ಪಾರದರ್ಶಕ ಮತ್ತು ಬಾಹ್ಯ ಪ್ರಭಾವಗಳಿಂದ ಮುಕ್ತವಾಗಿರಬೇಕು. ಪ್ರಶಸ್ತಿ ವಿಜೇತರ ಪಟ್ಟಿ ಮತ್ತು ತಜ್ಞರು ಶಿಫಾರಸ್ಸು ಮಾಡಿದ ಪಟ್ಟಿ ಭಿನ್ನವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.