“ದುಷ್ಟರ ವಿರುದ್ಧ ಹೋರಾಡಿ”: ಬಾಲಕಿಯರಿಗೆ ಖಡ್ಗ ವಿತರಿಸಿದ ಬಿಜೆಪಿ ಶಾಸಕ

Update: 2024-10-13 04:54 GMT

PC | nagalandpost.com

ಪಾಟ್ನಾ: ಬಿಹಾರದ ಸೀತಾಮರಿ ಜಿಲ್ಲೆಯಲ್ಲಿ ಶನಿವಾರ ನಡೆದ ವಿಜಯದಶಮಿ ಸಂದರ್ಭದಲ್ಲಿ ಬಿಜೆಪಿ ಶಾಸಕ ಮಿತಿಲೇಶ್ ಕುಮಾರ್ ಅವರು ಬಾಲಕಿಯರಿಗೆ ಖಡ್ಗಗಳನ್ನು ವಿತರಿಸಿರುವ ಕ್ರಮ ವಿವಾದಕ್ಕೆ ಆಸ್ಪದ ನೀಡಿದೆ.

"ಯಾವುದೇ ದುಷ್ಟ ಶಕ್ತಿಗಳು ನಮ್ಮ ಸಹೋದರಿಯರನ್ನು ಸ್ಪರ್ಶಿಸುವ ಸಾಹಸ ಮಾಡಿದರೆ, ಈ ಖಡ್ಗದ ಮೂಲಕ ಅವರ ಕೈಗಳನ್ನು ಕತ್ತರಿಸಿ" ಎಂದು ಸೀತಾಮರಿ ನಗರದ ಕಪ್ರೋಲ್ ರಸ್ತೆಯ ಪೂಜಾ ಪೆಂಡಾಲ್‍ನಲ್ಲಿ ನೀಡಿದ ವಿಜಯದಶಮಿ ಸಂದೇಶದಲ್ಲಿ ಅವರು ಕರೆ ನೀಡಿದರು.

"ಅಗತ್ಯಬಿದ್ದರೆ ನಮ್ಮ ಸಹೋದರಿಯರು ಅವರ ಕೈಗಳನ್ನು ಕತ್ತರಿಸುವ ಸಾಮಥ್ರ್ಯ ಗಳಿಸಿಕೊಳ್ಳುವಂತೆ ಮಾಡಬೇಕು. ನಾನು ಮತ್ತು ನೀವೆಲ್ಲರೂ ಇದನ್ನು ಮಾಡಬೇಕು. ನಮ್ಮ ಸಹೋದರಿಯರ ವಿರುದ್ಧ ಕೆಟ್ಟ ಉದ್ದೇಶವನ್ನು ಹೊಂದಿದ ಈ ಎಲ್ಲ ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡಬೇಕು" ಎಂದು ಗುಡುಗಿದರು.

ಈ ಉಪಕ್ರಮದಲ್ಲಿ ಜನ ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡ ಅವರು, ಜನರು ಅದರಲ್ಲೂ ಮುಖ್ಯವಾಗಿ ಮಹಿಳೆಯರು ದುಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ಪ್ರೋತ್ಸಾಹಿಸಬೇಕು ಎಂದು ಕೋರಿದರು. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಖಡ್ಗ ವಿತರಿಸಲಾಯಿತು.

ಹಲವು ಆಯುಧಗಳು, ಖಡ್ಗ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ಅವುಗಳಿಗೆ ಮಿಥಿಲೇಶ್ ಕುಮಾರ್ ಪೂಜೆ ಸಲ್ಲಿಸಿದರು. ಇವರು ಸೀತಾಮರಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಹಲವು ಕಡೆಗಳಲ್ಲಿ ಪೆಂಡಾಲ್‍ಗಳಿಗೆ ಭೇಟಿ ನೀಡಿ ಖಡ್ಗಗಳನ್ನು ವಿತರಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News