ಹರಿದ್ವಾರ | ರಾಮಲೀಲಾದಲ್ಲಿ ವಾನರರ ಪಾತ್ರ ವಹಿಸಿದ್ದ ಕೈದಿಗಳಿಬ್ಬರು ಪರಾರಿ
Update: 2024-10-13 01:33 GMT
ಹರಿದ್ವಾರ : ಉತ್ತರಾಖಂಡದ ಹರಿದ್ವಾರ ಜಿಲ್ಲಾ ಕಾರಾಗೃಹದಲ್ಲಿ ‘ರಾಮಲೀಲಾ’ ನಡೆಯುತ್ತಿರುವಾಗ ವಾನರರ ಪಾತ್ರ ವಹಿಸಿದ್ದ ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ.
ಪರಾರಿಯಾಗಿರುವವರನ್ನು ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಪಂಕಜ್ ಮತ್ತು ಅಪಹರಣ ಪ್ರಕರಣದ ವಿಚಾರಣಾಧೀನ ಕೈದಿ ರಾಜಕುಮಾರ್ ಎಂದು ಹೆಸರಿಸಲಾಗಿದೆ.
ಜೈಲಿನಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ತರಲಾಗಿದ್ದ ಏಣಿಯನ್ನು ಬಳಸಿ ಅವರು ಪರಾರಿಯಾಗಿದ್ದಾರೆ.
ನಿರ್ಲಕ್ಷ್ಯಕ್ಕಾಗಿ ಜೈಲು ಆಡಳಿತವನ್ನು ದೂಷಿಸಿದ ಹರಿದ್ವಾರ ಜಿಲ್ಲಾಧಿಕಾರಿ ಕರ್ಮೇಂದ್ರ ಸಿಂಗ್ ಅವರು, ಜೈಲಿನಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಮತ್ತು ರಾಮಲೀಲಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಶುಕ್ರವಾರ ನಸುಕಿನಲ್ಲಿ ಇದರ ಲಾಭ ಪಡೆದ ಕೈದಿಗಳು ಪರಾರಿಯಾಗಿದ್ದಾರೆ. ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇಲಾಖಾ ವಿಚಾರಣೆ ಮತ್ತು ಮ್ಯಾಜಿಸ್ಟ್ರೀರಿಯಲ್ ತನಿಖೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.