ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ನಟಿ ಕಂಗನಾ ರಣಾವತ್

Update: 2023-11-03 16:38 GMT

 ನಟಿ ಕಂಗನಾ ರಣಾವತ್ Photo- PTI

ದ್ವಾರಕಾ: ಶುಕ್ರವಾರ ಚುನಾವಣಾ ರಾಜಕಾರಣವನ್ನು ಪ್ರವೇಶಿಸುವ ಸುಳಿವು ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್, “ಒಂದು ವೇಳೆ ಶ್ರೀ ಕೃಷ್ಣ ಆಶೀರ್ವದಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ” ಎಂದು ಹೇಳಿದ್ದಾರೆ.

ಇಂದು (ಶುಕ್ರವಾರ) ಬೆಳಗ್ಗೆ ಶ್ರೀಕೃಷ್ಣನ ದ್ವಾರಕಾಧೀಶ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದ ಅವರು, ನೀವೇನಾದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, “ಶ್ರೀಕೃಷ್ಣನ ಕೃಪೆ ಇದ್ದರೆ ಸ್ಪರ್ಧಿಸುವೆ” ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಾಗಿದ್ದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಂಗನಾ ಶ್ಲಾಘಿಸಿದ್ದಾರೆ.

“ಬಿಜೆಪಿ ಸರ್ಕಾರದ ಪ್ರಯತ್ನದಿಂದಾಗಿ 600 ವರ್ಷಗಳ ನಂತರ ಭಾರತೀಯರು ಈ ದಿನವನ್ನು ನೋಡುವಂತಾಗಿದೆ. ನಾವು ಅದ್ಭುತ ಸಡಗರದೊಂದಿಗೆ ದೇವಾಲಯವನ್ನು ಅಭಿವೃದ್ಧಿ ಪಡಿಸುತ್ತೇವೆ. ಸನಾತನ ಧರ್ಮದ ಧ್ವಜವು ಇಡೀ ಜಗತ್ತಿನಾದ್ಯಂತ ಹಾರಾಡಬೇಕಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಆಗಿ ಕಂಗನಾ ರನೌತ್ ನಟಿಸಿದ್ದ ‘ತೇಜಸ್’ ಚಿತ್ರ ಇತ್ತೀಚೆಗಷ್ಟೇ ದೇಶಾದ್ಯಂತ ಬಿಡುಗಡೆಯಾಗಿದೆ. ಆದರೆ, ‘ತೇಜಸ್’ ಚಿತ್ರವು ನಿರೀಕ್ಷಿತ ಪ್ರದರ್ಶನ ಕಾಣದೆ ಶೇ. 90ಕ್ಕೂ ಹೆಚ್ಚು ಚಿತ್ರಮಂದಿರಗಳು ಆ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News