ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಬೆಂಬಲಿಸುವಂತೆ ತನ್ನ ಪಕ್ಷದ ಸಂಸದರಿಗೆ ಸೂಚಿಸಿದ ಪವನ್ ಕಲ್ಯಾಣ್

ಪವನ್ ಕಲ್ಯಾಣ್ (PTI)
ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ಮಂಡನೆಯಾಗಲಿರುವ ವಕ್ಫ್ ತಿದ್ದುಪಡಿಗೆ ಜನಸೇನಾ ಪಕ್ಷ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ವಕ್ಫ್ ತಿದ್ದುಪಡಿ ಮಸೂದೆ ಕುರಿತು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಹಾಗೂ ಮಸೂದೆಯ ಪರವಾಗಿ ಮತ ಚಲಾಯಿಸಬೇಕು ಎಂದು ತಮ್ಮ ಪಕ್ಷದ ಸಂಸದರಿಗೆ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜನಸೇನಾ ಪಕ್ಷ, "ಕೇಂದ್ರ ಸರಕಾರವು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸುತ್ತಿದ್ದು, ಅದನ್ನು ಜನಸೇನಾ ಪಕ್ಷ ಬೆಂಬಲಿಸುತ್ತಿದೆ. ಈ ತಿದ್ದುಪಡಿ ಮಸೂದೆಯಿಂದ ಮುಸ್ಲಿಂ ಸಮುದಾಯಕ್ಕೆ ಲಾಭವಾಗಲಿದೆ ಎಂದು ನಮ್ಮ ಪಕ್ಷ ಭಾವಿಸಿದೆ. ಈ ಸಂಬಂಧ ಜನಸೇನಾ ಪಕ್ಷದ ಲೋಕಸಭಾ ಸಂಸದರಿಗೆ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ನಿರ್ದೇಶನ ನೀಡಿದ್ದು, ಮಸೂದೆಯ ಮೇಲಿನ ಮತದಾನದಲ್ಲಿ ಭಾಗವಹಿಸಬೇಕು ಹಾಗೂ ಮಸೂದೆಯ ಪರ ಮತ ಚಲಾಯಿಸಬೇಕು ಎಂದು ಅವರಿಗೆ ಸೂಚಿಸಿದ್ದಾರೆ" ಎಂದು ಹೇಳಿದೆ.