ಏಕರೂಪ ನಾಗರಿಕ ಸಂಹಿತೆ ವಿರುದ್ಧ ಕಾನೂನು ಆಯೋಗಕ್ಕೆ ಆಕ್ಷೇಪಣೆ ಕಳುಹಿಸಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ಮಂಡಳಿಯ ಕಾರ್ಯಕಾರಿ ಸಮಿತಿಯು ಜೂನ್ 27 ರಂದು ಕಾರ್ಯಕಾರಿ ಸಭೆಯಲ್ಲಿ ಯುಸಿಸಿ ಕುರಿತು ಸಿದ್ಧಪಡಿಸಿದ ಕರಡು ಪ್ರತಿಕ್ರಿಯೆಯನ್ನು ಅನುಮೋದಿಸಿದ್ದು, ಬುಧವಾರ ಅದನ್ನು ಮಂಡಳಿಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಮಂಡಿಸಲಾಯಿತು ಎಂದು ಮಂಡಳಿಯ ವಕ್ತಾರ ಕಾಸಿಂ ರಸೂಲ್ ಇಲ್ಯಾಸ್ ಪಿಟಿಐಗೆ ತಿಳಿಸಿದ್ದಾರೆ.

Update: 2023-07-05 15:58 GMT
Editor : Muad | Byline : ವಾರ್ತಾಭಾರತಿ

ಫೈಲ್ ಫೋಟೋ 

ಲಖನೌ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ತನ್ನ ಆಕ್ಷೇಪಣೆಗಳನ್ನು ಕಾನೂನು ಆಯೋಗಕ್ಕೆ ಕಳುಹಿಸಿರುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಬುಧವಾರ ಹೇಳಿದೆ. ಕೇವಲ ಬುಡಕಟ್ಟು ಜನಾಂಗದವರನ್ನು ಮಾತ್ರವಲ್ಲದೆ ಪ್ರತಿಯೊಂದು ಧಾರ್ಮಿಕ ಅಲ್ಪಸಂಖ್ಯಾತರನ್ನು ಏಕರೂಪ ನಾಗರಿಕ ಸಂಹಿತೆಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಎಐಎಂಪಿಎಲ್‌ಬಿ ಒತ್ತಾಯಿಸಿದೆ.

ಮಂಡಳಿಯ ಕಾರ್ಯಕಾರಿ ಸಮಿತಿಯು ಜೂನ್ 27 ರಂದು ಕಾರ್ಯಕಾರಿ ಸಭೆಯಲ್ಲಿ ಯುಸಿಸಿ ಕುರಿತು ಸಿದ್ಧಪಡಿಸಿದ ಕರಡು ಪ್ರತಿಕ್ರಿಯೆಯನ್ನು ಅನುಮೋದಿಸಿದ್ದು, ಬುಧವಾರ ಅದನ್ನು ಮಂಡಳಿಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಮಂಡಿಸಲಾಯಿತು ಎಂದು ಮಂಡಳಿಯ ವಕ್ತಾರ ಕಾಸಿಂ ರಸೂಲ್ ಇಲ್ಯಾಸ್ ಪಿಟಿಐಗೆ ತಿಳಿಸಿದ್ದಾರೆ.

ಈ ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದ್ದು, ನಂತರ ಅದನ್ನು ಕಾನೂನು ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಯುಸಿಸಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಕಾನೂನು ಆಯೋಗವು ವಿವಿಧ ಪಕ್ಷಗಳು ಮತ್ತು ಮಧ್ಯಸ್ಥಗಾರರಿಗೆ ಜುಲೈ 14 ರವರೆಗೆ ಕಾಲಾವಕಾಶ ನೀಡಿತ್ತು. ಕಾಲಾವಕಾಶವನ್ನು ಆರು ತಿಂಗಳು ವಿಸ್ತರಿಸುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಈ ಹಿಂದೆ ಮನವಿ ಮಾಡಿತ್ತು.

ಮಂಡಳಿಯ 251 ಸದಸ್ಯರಲ್ಲಿ ಸುಮಾರು 250 ಜನರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಇಲ್ಯಾಸ್ ಹೇಳಿದ್ದಾರೆ.

ಬುಡಕಟ್ಟು ಜನಾಂಗದವರು ಮಾತ್ರವಲ್ಲದೆ ಪ್ರತಿಯೊಬ್ಬ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೂಡಾ ಯುಸಿಸಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಎಐಎಂಪಿಎಲ್‌ಬಿ ಅಭಿಪ್ರಾಯಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಈಶಾನ್ಯ ಭಾರತದ ಆದಿವಾಸಿಗಳನ್ನು ಸೇರಿದಂತೆ ಇತರೆ ಅಲ್ಪಸಂಖ್ಯಾತ ಆದಿವಾಸಿಗಳನ್ನು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವ್ಯಾಪ್ತಿಯಿಂದ ಹೊರಗಿಡಬೇಕೆಂದು ಕಾನೂನು ಸಂಸದೀಯ ಸಮಿತಿಯ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಸುಶೀಲ್ ಮೋದಿ ಸೋಮವಾರ ಸಮಿತಿಯ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ ಎಂದು ವರದಿಯಾಗಿದ್ದವು.

"ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಯಾವಾಗಲೂ ಯುಸಿಸಿ ವಿರುದ್ಧವಾಗಿದೆ. ಬಹು ಧರ್ಮಗಳು ಮತ್ತು ಸಂಸ್ಕೃತಿಗಳಿಗೆ ಸೇರಿದ ಜನರನ್ನು ಒಳಗೊಂಡಿರುವ ಭಾರತದಂತಹ ದೇಶದಲ್ಲಿ ಯುಸಿಸಿ ಹೆಸರಿನಲ್ಲಿ ಒಂದೇ ಕಾನೂನನ್ನು ಹೇರುವುದು ಪ್ರಜಾಸತ್ತಾತ್ಮಕ ಹಕ್ಕುಗಳ ಉಲ್ಲಂಘನೆಯಾಗಿದೆ.” ಎಂದು ಇಲ್ಯಾಸ್‌ ಹೇಳಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಸಾರ್ವಜನಿಕರು ಒಂದಾಗಬೇಕು ಎಂದು ಎಐಎಂಪಿಎಲ್‌ಬಿ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News