ಬಿಹಾರ: ಭಾರತ್ ಜೋಡೊ ನ್ಯಾಯ ಯಾತ್ರೆ ಸಿದ್ಧತಾ ಸಭೆಗೆ 9 ಕಾಂಗ್ರೆಸ್ ಶಾಸಕರು ಗೈರು !

Update: 2024-01-28 02:52 GMT

Photo: TOI

ಪಾಟ್ನಾ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯ ಸಿದ್ಧತೆಗಳ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಗೆ ಕಾಂಗ್ರೆಸ್ ಪಕ್ಷದ 19 ಶಾಸಕರ ಪೈಕಿ ಕೇವಲ 10 ಮಂದಿ ಮಾತ್ರ ಭಾಗವಹಿಸಿದ್ದು, 9 ಮಂದಿಯ ಗೈರುಹಾಜರಿ ಬಿಹಾರ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಈ ಬಗೆಗಿನ ವದಂತಿಗಳನ್ನು ತಳ್ಳಿಹಾಕಿದ್ದು, ಯಾತ್ರೆಯ ಮೇಲುಸ್ತುವಾರಿ ವಹಿಸಬೇಕಿರುವ ಶಾಸಕರನ್ನು ಮಾತ್ರ ಸಭೆಗೆ ಆಹ್ವಾನಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

"ಇದು ಶಾಸಕಾಂಗ ಪಕ್ಷದ ಸಭೆಯಲ್ಲ; ಈ ಬಗ್ಗೆ ಹೆಚ್ಚಿನದೇನನ್ನೂ ಅರ್ಥೈಸಿಕೊಳ್ಳುವ ಅಗತ್ಯವಿಲ್ಲ" ಎಂದು ಅವರು ಸಮುಜಾಯಿಷಿ ನೀಡಿದ್ದಾರೆ.

"ಸೋಮವಾರ ಕಿಶನ್ ಗಂಜ್ ಜಿಲ್ಲೆಯ ಮೂಲಕ ನ್ಯಾಯ ಯಾತ್ರೆ ಬಿಹಾರವನ್ನು ಪ್ರವೇಶಿಸುತ್ತಿದೆ. ಮುಂದಿನ ದಿನ ಪುರ್ನಿಯಾದಲ್ಲಿ ರ್ಯಾಲಿ ನಡೆಯಲಿದೆ. ಭಾನುವಾರ ನಡೆಯುವ ಪಕ್ಷದ ಶಾಸಕರ ಸಭೆಯಲ್ಲಿ ಎಲ್ಲ 19 ಶಾಸಕರು ಪಾಲ್ಗೊಳ್ಳಲಿದ್ದಾರೆ" ಎಂದು ಶಕೀಲ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News