ಕೋಲ್ಕತಾ | ಆರೋಪಿಯ ಬಟ್ಟೆ ವಶಪಡಿಸಿಕೊಳ್ಳಲು 2 ದಿನ ವಿಳಂಬಿಸಿದ ಪೊಲೀಸರು : ಸಿಬಿಐ

Update: 2024-09-18 16:07 GMT

File Photo

ಕೋಲ್ಕತಾ : ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್‌ನ ಪಾತ್ರ ನಿಚ್ಚಳವಾಗಿದ್ದರೂ, ಕೋಲ್ಕತಾದ ತಲ ಪೊಲೀಸರು ಎರಡು ದಿನಗಳವರೆಗೆ ಆತನ ಬಟ್ಟೆಗಳನ್ನು ವಶಪಡಿಸಿಕೊಂಡಿರಲಿಲ್ಲ ಎಂದು ಸಿಬಿಐ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಲಿಕಾ ವೈದ್ಯೆಯೊಬ್ಬರನ್ನು ಆಗಸ್ಟ್ 9ರ ಮುಂಜಾನೆ ಅತ್ಯಾಚಾರಗೈದು ಕೊಲೆಗೈಯಲಾಗಿತ್ತು. ಅವರು ಮುನ್ನಾ ದಿನ ರಾತ್ರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಲಗಿದ್ದರು. ಅಲ್ಲಿಯೇ ಅವರ ಮೇಲೆ ದಾಳಿ ಮಾಡಲಾಗಿತ್ತು. ರಾಯ್ ಸೆಮಿನಾರ್ ಹಾಲನ್ನು ಪ್ರವೇಶಿಸುವುದು ಸಿಸಿಟಿವಿ ವೀಡಿಯೊಗಳಲ್ಲಿ ಕಂಡು ಬಂದಿತ್ತು.

ವೈದ್ಯೆಯ ಅತ್ಯಾಚಾರ-ಕೊಲೆಯಲ್ಲಿ ಸಂಜಯ್ ರಾಯ್‌ನ ಪಾತ್ರವು ಮಾರನೇ ದಿನ, ಅಂದರೆ ಆಗಸ್ಟ್ 10ರಂದೇ ಸ್ಪಷ್ಟವಾಗಿತ್ತು. ಆದರೆ, ತಲ ಪೊಲೀಸರು ಅವನ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲು ಎರಡು ದಿನಗಳನ್ನು ಅನಗತ್ಯವಾಗಿ ವಿಳಂಬಿಸಿದರು ಎಂದು ಸಿಬಿಐ ಅಧಿಕಾರಿಗಳು ಪಿಟಿಐಗೆ ತಿಳಿಸಿದರು. ಅದು ಆರೋಪಿಯ ವಿರುದ್ಧ ಪ್ರಬಲ ಪುರಾವೆಯಾಗಬಹುದಾಗಿತ್ತು ಎಂದು ಅಧಿಕಾರಿಗಳು ಹೇಳಿದರು.

ಈ ವಿಳಂಬದಲ್ಲಿ ದುರುದ್ದೇಶವಿದೆ ಎಂದು ಸಿಬಿಐ ಆರೋಪಿಸಿದೆ.

ಅಪರಾಧ ನಡೆದ ಐದು ದಿನಗಳ ಬಳಿಕ, ಆಗಸ್ಟ್ 14ರಂದು ಪ್ರಕರಣದ ತನಿಖೆಯನ್ನು ಸಿಬಿಐ ತನ್ನ ಕೈಗೆತ್ತಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News