ಬಹ್ರೈಚ್ ಹಿಂಸಾಚಾರ | ಆರೋಪಿಯ ಮನೆ ನೆಲಸಮಕ್ಕೆ ನೊಟೀಸ್ ಜಾರಿ
ಉತ್ತರಪ್ರದೇಶ : ಸುಪ್ರೀಂಕೋರ್ಟ್ ಅನುಮತಿಯಿಲ್ಲದೆ ಯಾವುದೇ ಬುಲ್ಡೋಝರ್ ಕಾರ್ಯಾಚರಣೆ ನಡೆಸಬಾರದು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ, ಉತ್ತರ ಪ್ರದೇಶದ ಬಹ್ರೈಚ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯ ನಿವಾಸವನ್ನು ಕೆಡವಲು ಲೋಕೋಪಯೋಗಿ ಇಲಾಖೆ ನೊಟೀಸ್ ನೀಡಿದೆ.
ಬಹ್ರೈಚ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತ ಹಮೀದ್ ಅವರ ನಿವಾಸವನ್ನು ʼಅಕ್ರಮ ಕಟ್ಟಡʼವೆಂದು ಕೆಡವಲು ಲೋಕೋಪಯೋಗಿ ಇಲಾಖೆ ನೋಟಿಸ್ ನೀಡಿದೆ.
ಬಹ್ರೈಚ್ ನಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಹಮೀದ್ ಹಾಗೂ ಇತರ ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಗುರುವಾರ ಪೊಲೀಸರು ಮುಹಮ್ಮದ್ ತಾಲೀಮ್ ಮತ್ತು ಮುಹಮ್ಮದ್ ಸರ್ಫರಾಝ್ ಅವರ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದರು. ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನಡೆದ ಎನ್ಕೌಂಟರ್ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ರವಿವಾರ ಬಹ್ರೈಚ್ ನ ಮಹಾಸಿ ಪ್ರದೇಶದಲ್ಲಿ ದುರ್ಗಾ ಮೂರ್ತಿ ನಿಮಜ್ಜನ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದ್ದು, ರಾಮ್ ಗೋಪಾಲ್ ಮಿಶ್ರಾ ಎಂಬಾತನ ಹತ್ಯೆ ನಡೆದಿತ್ತು.
ಬಹ್ರೈಚ್ ಹಿಂಸಾಚಾರಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉತ್ತರ ಪ್ರದೇಶದ ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.