ಏಳು ತಿಂಗಳುಗಳಿಂದಲೂ ಮುಖ್ಯಸ್ಥರಿಲ್ಲದ ಕಾನೂನು ಆಯೋಗಕ್ಕೆ ನಿವೃತ್ತ ನ್ಯಾ.ಮಹೇಶ್ವರಿ ನೇಮಕ ಸಾಧ್ಯತೆ
Photo : Credit: www.sci.gov.in
ಹೊಸದಿಲ್ಲಿ: ಕಳೆದ ಏಳು ತಿಂಗಳುಗಳಿಂದಲೂ ಮುಖ್ಯಸ್ಥರಿಲ್ಲದ 23ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ. ದಿನೇಶ ಮಹೇಶ್ವರಿ ಅವರು ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನ್ಯಾ.ಮಹೇಶ್ವರಿ ಜೊತೆಗೆ ಇನ್ನೂ ಇಬ್ಬರು ಸದಸ್ಯರು ಅಧಿಕಾರ ವಹಿಸಿಕೊಳ್ಳಲಿದ್ದು, ಅವರಲ್ಲಿ ಒಬ್ಬರು 22ನೇ ಕಾನೂನು ಆಯೋಗದ ಮಾಜಿ ಸದಸ್ಯ ಪ್ರೊ.ಡಿ.ಪಿ.ಶರ್ಮಾ ಆಗಿರಬಹುದು. ನ್ಯಾ.ಮಹೇಶ್ವರಿ ನೇಮಕವನ್ನು ಘೋಷಿಸುವ ವಿಧ್ಯುಕ್ತ ಅಧಿಸೂಚನೆ ಒಂದೆರಡು ದಿನಗಳಲ್ಲಿ ಹೊರಬೀಳುವ ನಿರೀಕ್ಷೆಯಿದೆ ಎಂದು ಈ ಮೂಲಗಳು ತಿಳಿಸಿವೆ.
23ನೇ ಕಾನೂನು ಆಯೋಗವನ್ನು ಕಳೆದ ವರ್ಷದ ಸೆ.2ರಂದು ಮೂರು ವರ್ಷಗಳ ಅವಧಿಗೆ ರಚಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ಹಾಲಿ ನ್ಯಾಯಾಧೀಶರನ್ನು ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ನೇಮಕಗೊಳಿಸಲು ಅವಕಾಶವಿದೆಯಾದರೂ,ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧಿಶರು ಮತ್ತು ಹೈಕೋರ್ಟ್ಗಳ ಮಾಜಿ ಮುಖ್ಯ ನ್ಯಾಯಾಧೀಶರು ಈ ಉನ್ನತ ಹುದ್ದೆಗಳನ್ನು ವಹಿಸಿಕೊಳ್ಳುತ್ತಾರೆ.
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯನ್ನು ಜಾರಿಗೆ ತರಬಹುದೇ ಎನ್ನುವುದನ್ನು ಪರಿಶೀಲಿಸುವ ಕಾರ್ಯಭಾರವನ್ನೂ ಆಯೋಗವು ಹೊಂದಿದೆ.
ನ್ಯಾ.ಮಹೇಶ್ವರಿ ಅವರು ಮೇ 2023ರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ನಿವೃತ್ತರಾಗಿದ್ದರು. ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಳ್ಳುವ ಮುನ್ನ ಅವರು ಮೇಘಾಲಯ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.
ಕಾನೂನು ಸಚಿವಾಲಯದ ಮೂಲಗಳ ಪ್ರಕಾರ ಯುಸಿಸಿ ಕರಡನ್ನು ಪೂರ್ಣಗೊಳಿಸುವ ಹೊಣೆಯನ್ನೂ ಆಯೋಗವು ಹೊಂದಿದೆ. 22ನೇ ಕಾನೂನು ಆಯೋಗವು ಯುಸಿಸಿ ಕುರಿತು ತನ್ನ ವರದಿಯನ್ನು ಅಂತಿಮಗೊಳಿಸಿರಲಿಲ್ಲ.