ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ: ಹವಾಮಾನ ಇಲಾಖೆ

Update: 2023-07-09 05:01 GMT

ಹೊಸದಿಲ್ಲಿ: ಮುಂದಿನ ಕೆಲವು ದಿನಗಳಲ್ಲಿ ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಿಲ್ಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಮಾಪನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ದಿಲ್ಲಿಯಲ್ಲಿ 40 ವರ್ಷಗಳಲ್ಲಿ ಮೊದಲ ಬಾರಿ ಭಾರೀ ಮಳೆ ಸುರಿದಿದೆ. ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಜಲಾವೃತವಾಗಿದ್ದು, ಇದು ಟ್ರಾಫಿಕ್ ಜಾಮ್ ಗೆ ಕಾರಣವಾಯಿತು. ನಗರದಲ್ಲಿ 24 ಗಂಟೆಗಳಲ್ಲಿ 153 ಮಿಮೀ ಮಳೆ ದಾಖಲಾಗಿದೆ, ಇದು 1982 ರಿಂದ ಜುಲೈನಲ್ಲಿ ಒಂದೇ ದಿನದಲ್ಲಿ ಸುರಿದ ಅತಿ ಹೆಚ್ಚು.ಮಳೆಯಾಗಿದೆ.

ಇಂದು ಕೂಡ ದಿಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರೆದಿದೆ.

ದಿಲ್ಲಿಯಲ್ಲಿ 58 ವರ್ಷದ ಮಹಿಳೆಯೊಬ್ಬರು ಫ್ಲಾಟ್ ನ ಮೇಲ್ಛಾವಣಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ 24 ಗಂಟೆಗಳ ಅವಧಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ರಾಜ್ ಸಮಂದ್, ಜಲೋರ್, ಪಾಲಿ, ಅಜ್ಮೀರ್, ಅಲ್ವಾರ್, ಬನ್ಸ್ವಾರಾ, ಭರತ್ ಪುರ, ಭಿಲ್ವಾರಾ, ಬುಂಡಿ, ಚಿತ್ತೋರ್ ಗಢ, ದೌಸಾ, ಧೌಲ್ ಪುರ್, ಜೈಪುರ ಮತ್ತು ಕೋಟಾ ಸೇರಿದಂತೆ ರಾಜಸ್ಥಾನದ ಒಂಬತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ.

ನಿರಂತರ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ವಾರ್ಷಿಕ ಅಮರನಾಥ ಯಾತ್ರೆಯನ್ನು ಸತತ ಮೂರನೇ ದಿನವಾದ ಇಂದು ಸ್ಥಗಿತಗೊಳಿಸಲಾಗಿದೆ. ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸುಮಾರು 3,000 ವಾಹನಗಳು ಸಿಲುಕಿಕೊಂಡಿವೆ, ಅಲ್ಲಿ ನಿನ್ನೆ ರಸ್ತೆಯ ಒಂದು ಭಾಗವು ಕುಸಿದಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News