ʼಆಜ್‌ ತಕ್‌ʼನ ನಿರೂಪಕ ಸುಧೀರ್‌ ಚೌಧರಿ ಭಾಷಣ ಕಾರ್ಯಕ್ರಮವನ್ನು ರದ್ದುಗೊಳಿಸಿದ ಐಐಟಿ-ಬಾಂಬೆ

Update: 2024-02-06 07:54 GMT

ಸುಧೀರ್‌ ಚೌಧರಿ (Photo credit: X/@sudhirchaudhary)

ಮುಂಬೈ: ಆಜ್‌ ತಕ್‌ ನ ನಿರೂಪಕ ಸುಧೀರ್‌ ಚೌಧರಿ ಅವರನ್ನು ಇ-ಸಮ್ಮಿಟ್‌ 2024 ರಲ್ಲಿ ರವಿವಾರ ಭಾಷಣ ನೀಡಲು ಅಹ್ವಾನಿಸಿದ್ದ ಐಐಟಿ-ಬಾಂಬೆ, ಆದಿವಾಸಿಗಳು ಮತ್ತು ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್‌ ಸೊರೇನ್‌ ಕುರಿತಂತೆ ಚೌಧರಿ ಅವರ ಹೇಳಿಕೆಗಳಿಗೆ ವಿದ್ಯಾರ್ಥಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ಅವರ ಭಾಷಣವನ್ನು ಸಂಸ್ಥೆ ರದ್ದುಗೊಳಿಸಿದೆ.

ಸಂಸ್ಥೆಯ ಸಭಾಂಗಣದಲ್ಲಿ ಚೌಧರಿ ಭಾಷಣ ನೀಡಬೇಕಿತ್ತು, ಆದರೆ ಅವರ ಸ್ಥಾನದಲ್ಲಿ ಶಾಪ್‌ಕ್ಲೂಸ್‌ ಸ್ಥಾಪಕಿ ರಾಧಿಕಾ ಅಗರ್ವಾಲ್‌ ಅವರನ್ನು ಸಂಸ್ಥೆ ಆಹ್ವಾನಿಸಿದ ಕಾರಣ ಅವರು ಭಾಷಣ ನೀಡಿದ್ದಾರೆ.

ಕಳೆದ ಶನಿವಾರ ಆರಂಭಗೊಂಡ ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘಟನೆ ಇ-ಸೆಲ್‌ ಆಯೋಜಿಸಿತ್ತು. ಆದರೆ ಕಾರ್ಯಕ್ರಮದ ಭಾಷಣಕಾರರ ಕುರಿತ ಅಂತಿಮ ನಿರ್ಧಾರವನ್ನು ಸಂಸ್ಥೆಯ ಆಡಳಿತ ತೆಗೆದುಕೊಳ್ಳುತ್ತದೆ.

ಚೌಧರಿ ಈ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಉದ್ಯಮಶೀಲತೆಯ ಕುರಿತು ಮಾತನಾಡಬೇಕಿತ್ತು. ಆದರೆ ಅವರ ಭಾಷಣ ಕೈಬಿಡಲಾಗಿರುವ ಕುರಿತು ಅವರಿಗೆ ಶನಿವಾರ ರಾತ್ರಿ ಮಾಹಿತಿ ನೀಡಲಾಯಿತು.

ಜನವರಿ 31ರ ತಮ್ಮ ಪ್ರೈಮ್‌ ಟೈಮ್‌ ಶೋ “ಬ್ಲ್ಯಾಕ್‌ ಎಂಡ್‌ ವೈಟ್‌”ನಲ್ಲಿ ಈಡಿಯಿಂದ ಬಂಧಿತ ಹೇಮಂತ್‌ ಸೊರೇನ್‌ ಕುರಿತು ಪ್ರತಿಕ್ರಿಯಿಸಿದ್ದ ಚೌಧರಿ, ಸೊರೇನ್‌ ಮತ್ತವರ ಕುಟುಂಬ “ಆದಿವಾಸಿಗಳಲ್ಲ” ಏಕೆಂದರೆ ಅವರು ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಾರೆ ಎಂದಿದ್ದರು.

ಸೊರೇನ್‌ ಜೈಲಿನಲ್ಲಿ ದಿನದೂಡಬೇಕಾದ ಕುರಿತು ಪ್ರತಿಕ್ರಿಯಿಸಿದ್ದ ಅವರು “ಕಾಡಿನಲ್ಲಿ ವಾಸಿಸುವ ಆದಿವಾಸಿಯಂತೆ 20, 30, 40 ವರ್ಷ ಹಿಂದೆ ಹೋಗುವುದು,” ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News