ಜಯಾ ಅಮಿತಾಭ್‌ ಬಚ್ಚನ್‌ ಎಂದು ರಾಜ್ಯಸಭಾ ಉಪಸಭಾಪತಿ ಕರೆದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಯಾ ಬಚ್ಚನ್‌

Update: 2024-07-31 12:47 GMT

 ಜಯಾ ಬಚ್ಚನ್‌ | PC : NDTV 

ಹೊಸದಿಲ್ಲಿ: ಹಿರಿಯ ನಟಿ ಹಾಗೂ ರಾಜ್ಯಸಭಾ ಸಂಸದೆ ಜಯಾ ಬಚ್ಚನ್‌ ಅವರನ್ನು ಉಲ್ಲೇಖಿಸಿ ಮಾತನಾಡುವಾಗ ಅವರ ಪತಿ ಹಾಗೂ ನಟ ಅಮಿತಾಭ್‌ ಬಚ್ಚನ್‌ ಅವರನ್ನೂ ಸೇರಿಸಿ ರಾಜ್ಯಸಭಾ ಉಪಸಭಾಪತಿ ಹರಿವಂಶ್‌ ನಾರಾಯಣ್‌ ಸಿಂಗ್‌ ಸೋಮವಾರ ಹೇಳಿದ್ದು ಜಯಾ ಅವರ ಕೋಪಕ್ಕೆ ಕಾರಣವಾಯಿತು.

ಜಯಾ ಬಚ್ಚನ್‌ ಅವರಿಗೆ ಮಾತನಾಡಲು ಅವಕಾಶ ನೀಡುವ ವೇಳೆ ಹರಿವಂಶ್‌ ನಾರಾಯಣ್‌ ಅವರು “ಶ್ರೀಮತಿ ಜಯಾ ಅಮಿತಾಭ್‌ ಬಚ್ಚನ್‌ ಜೀ, ದಯವಿಟ್ಟು,” ಎಂದಿದ್ದರು.

ಆಗ ಥಟ್ಟನೆ ಪ್ರತಿಕ್ರಿಯಿಸಿದ ಜಯಾ ಬಚ್ಚನ್‌,”ಸರ್‌ ಕೇವಲ ಜಯಾ ಬಚ್ಚನ್‌ ಎಂದಿದ್ದರೆ ಸಾಕಿತ್ತು,” ಎಂದರು.

ಆಗ ಉತ್ತರಿಸಿದ ಹರಿವಂಶ್‌ ನಾರಾಯಣ್‌ ಸಿಂಗ್‌, ಜಯಾ ಅವರ ಹೆಸರು ಸಂಸತ್‌ ದಾಖಲೆಗಳಲ್ಲಿ “ಜಯಾ ಅಮಿತಾಭ್‌ ಬಚ್ಚನ್” ಎಂಬುದಾಗಿದೆ ಎಂದರು.

“ನಿಮ್ಮ ಪೂರ್ಣ ಹೆಸರು ಅಲ್ಲಿ ಬರೆಯಲಾಗಿತ್ತು, ನಾನು ಅದನ್ನೇ ಹೇಳಿದೆ,” ಎಂದು ಸಿಂಗ್‌ ಹೇಳಿದರು.

“ಇದೊದು ಹೊಸತು, ಮಹಿಳೆಯರನ್ನು ಅವರ ಪತಿಯಂದಿರ ಹೆಸರುಗಳ ಆಧಾರದಲ್ಲಿ ಗುರುತಿಸುವುದು. ಅವರಿಗೆ (ಮಹಿಳೆಯರಿಗೆ) ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳಿಲ್ಲ,” ಎಂದು ಜಯಾ ಬಚ್ಚನ್‌ ಅಸಮಾಧಾನದಿಂದ ಹೇಳಿದರು.

ನಂತರ ಜಯಾ ಅವರು ದಿಲ್ಲಿ ಕೋಚಿಂಗ್‌ ಸೆಂಟರ್‌ನಲ್ಲಿ ಮಳೆ ನೀರಿನಿಂದ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಸಾವಿನ ಕುರಿತು ಉಲ್ಲೇಖಿಸಿ, ಇದೊಂದು ದುಃಖದಾಯಕ ಘಟನೆ, ಈ ವಿಚಾರದಲ್ಲಿ ರಾಜಕೀಯ ಮಾಡಬಾರದು, ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News