ರಾಜ್ಯದ ಸ್ವಾಯತ್ತತೆ ಕುರಿತು ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಿದ ತಮಿಳುನಾಡು ಸಿಎಂ ಸ್ಟಾಲಿನ್

ಎಂ.ಕೆ. ಸ್ಟಾಲಿನ್ (Photo: PTI)
ಚೆನ್ನೈ: ಕೇಂದ್ರ ಸರಕಾರದ ಜೊತೆಗೆ ಹೆಚ್ಚುತ್ತಿರುವ ಜಟಾಪಟಿಯ ಮಧ್ಯೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜ್ಯದ ಸ್ವಾಯತ್ತತೆ ಕುರಿತು ವರದಿ ನೀಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ.
ಈ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ರಾಜ್ಯದ ಸ್ವಾಯತ್ತತೆಯನ್ನು ಕಾಪಾಡುವ ಉದ್ದೇಶದಿಂದ ಈ ಸಮಿತಿಯು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಸಂಬಂಧದ ವಿವರವಾದ ಅಧ್ಯಯನವನ್ನು ಕೈಗೊಳ್ಳಲಿದೆ. ಸಮಿತಿಯು 2026ರ ಜನವರಿಯಲ್ಲಿ ಮಧ್ಯಂತರ ವರದಿಯನ್ನು ಮತ್ತು ಎರಡು ವರ್ಷಗಳ ಒಳಗೆ ಶಿಫಾರಸುಗಳೊಂದಿಗೆ ಅಂತಿಮ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಸ್ಟಾಲಿನ್ ವಿಧಾನಸಭೆಗೆ ಮಾಹಿತಿ ನೀಡಿದರು.
ಮಾಜಿ ಅಧಿಕಾರಿಗಳಾದ ಅಶೋಕ್ ಶೆಟ್ಟಿ ಮತ್ತು ಮು ನಾಗರಾಜನ್ ಅವರನ್ನು ಒಳಗೊಂಡ ಸಮಿತಿಯು ಭಾರತವನ್ನು ರೂಪಿಸುವ ರಾಜ್ಯಗಳ ಒಕ್ಕೂಟ ವ್ಯವಸ್ಥೆಯ ಸಮಗ್ರತೆಗೆ ಧಕ್ಕೆಯಾಗದಂತೆ ಕಾನೂನುಗಳನ್ನು ನಿರ್ಣಯಿಸುವ ಮತ್ತು ಮೌಲ್ಯಮಾಪನ ಮಾಡುವ ನಿರೀಕ್ಷೆಯಿದೆ ಎಂದು ಸ್ಟಾಲಿನ್ ಹೇಳಿದರು.