ಕೊಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಯು-ಟರ್ನ್!

Update: 2024-08-25 02:40 GMT

PC: x.com/PSravga

ಕೊಲ್ಕತ್ತಾ: ಇಲ್ಲಿನ ಆರ್ ಜಿ ಕರ್ ಅಸ್ಪತ್ರೆಯ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ ನ ಮಂಪರು ಪರೀಕ್ಷೆ ಭಾನುವಾರ ನಡೆಯಲಿದೆ. ಈ ಸುಳ್ಳು ಪತ್ತೆ ಪರೀಕ್ಷೆಗೆ ಮುನ್ನ ಹೇಳಿಕೆ ನೀಡಿರುವ ಆರೋಪಿ ತಾನು ಪ್ರಕರಣದ ಬಗ್ಗೆ ತಪ್ಪೊಪ್ಪಿಕೊಂಡಿಲ್ಲ. ಅಮಾಯಕನಾದ ನನ್ನನ್ನು ಈ ಭೀಕರ ಹತ್ಯೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾನೆ.

ಈ ಅತ್ಯಾಚಾರ ಹಾಗೂ ಹತ್ಯೆ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಸಂಜಯ್ ರಾಯ್ ಜೈಲಿನ ಭದ್ರತಾ ಸಿಬ್ಬಂದಿ ಜತೆ ಮಾತನಾಡುವ ವೇಳೆ ಹೇಳಿದ್ದಾನೆ ಎಂದು ಜೈಲು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸಂಜಯ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಈ ಮೊದಲು ಹೇಳಿಕೆ ನೀಡಿದ್ದರು.

ಸೀಲ್ದಾ ಎಸಿಜೆಎಂ ಕೋರ್ಟ್ ಮುಂದೆ ಶುಕ್ರವಾರ ಆರೋಪಿ ಇಂಥದ್ದೇ ಹೇಳಿಕೆ ನೀಡಿದ್ದ. ತಾನು ಅಮಾಯಕ ಎನ್ನುವುದನ್ನು ಸಾಬೀತುಪಡಿಸುವ ಸಲುವಾಗಿ ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಿದ್ದಾಗಿ ಈತ ಹೇಳಿದ್ದ. ಪ್ರಕರಣದ ಬಗ್ಗೆ ತನಗೇನೂ ತಿಳಿಯದು ಎಂದಿದ್ದ.

ಆದರೆ ಆತನ ಹೇಳಿಕೆಗಳಲ್ಲಿ ಅನಿಶ್ಚಿತತೆಗಳು ಇರುವುದನ್ನು ಸಿಬಿಐ ಅಧಿಕಾರಿಗಳು ಮತ್ತು ಪೊಲೀಸರು ಕಂಡುಕೊಂಡಿದ್ದಾರೆ. ತನಿಖಾಧಿಕಾರಿಗಳನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಅವರು ಆಪಾದಿಸಿದ್ದಾರೆ. ಆತನ ಮುಖದ ಮೇಲೆ ಆಗಿರುವ ಗಾಯ ಹಾಗೂ ಅಪರಾಧದ ಸಮಯದಲ್ಲಿ ಕಟ್ಟಡದಲ್ಲಿದ್ದ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಸಮರ್ಥನೆ ನೀಡಿಲ್ಲ ಎನ್ನುವುದು ಪೊಲೀಸರ ವಾದ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News