ತಪ್ಪು ಮಾಹಿತಿಯಿಂದ ಮುಂದಿನ ಎರಡು ವರ್ಷಗಳಲ್ಲಿ ಭಾರತಕ್ಕೆ ಹೆಚ್ಚಿನ ಅಪಾಯ: ವರ್ಲ್ಡ್‌ ಇಕನಾಮಿಕ್‌ ಫೋರಂ ವರದಿ

Update: 2024-01-12 07:06 GMT

ಸಾಂದರ್ಭಿಕ ಚಿತ್ರ (Photo credit: medianalisis.org)

ಹೊಸದಿಲ್ಲಿ: ತಪ್ಪು ಮಾಹಿತಿ ಹಾಗೂ ಸುಳ್ಳು ಮಾಹಿತಿಯು ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಾಗೂ ಮುಂದಿನ ಎರಡು ವರ್ಷಗಳಿಗೂ ಹೆಚ್ಚು ಸಮಯ ಭಾರತಕ್ಕೆ ಹೆಚ್ಚಿನ ಅಪಾಯವೊಡ್ಡಲಿವೆ ಎಂದು ತನ್ನ ವರದಿಯಲ್ಲಿ ವರ್ಲ್ಡ್‌ ಇಕನಾಮಿಕ್‌ ಫೋರಂ ಹೇಳಿದೆ.

ಸಾಂಕ್ರಾಮಿಕ ರೋಗಗಳು, ಅಕ್ರಮ ಆರ್ಥಿಕ ಚಟುವಟಿಕೆ, ಅಸಮಾನತೆ ಮತ್ತು ಕಾರ್ಮಿಕರ ಕೊರತೆಗಳು ಕೂಡ ಮುಂದಿನ ಎರಡು ವರ್ಷಗಳಲ್ಲಿ ಭಾರತಕ್ಕೆ ಅಪಾಯವುಂಟು ಮಾಡಲಿವೆ ಎಂದು ಸಂಸ್ಥೆ ಹೇಳಿದೆ.

ಭಾರತ ಸಹಿತ ಮುಂದಿನ ಎರಡು ವರ್ಷಗಳಲ್ಲಿ ಚುನಾವಣೆ ಎದುರಿಸುವ ರಾಷ್ಟ್ರಗಳಲ್ಲಿ ಸರ್ಕಾರಗಳ ಕಾನೂನುಬದ್ಧತೆಯನ್ನು ಸುಳ್ಳು ಮಾಹಿತಿಗಳು “ಗಂಭೀರವಾಗಿ ಅಸ್ಥಿರಗೊಳಿಸಬಹುದು” ಎಂದು ವರದಿ ಹೇಳಿದೆ.

ʼದಿ ಗ್ಲೋಬಲ್‌ ರಿಸ್ಕ್ಸ್‌ ರಿಪೋರ್ಟ್‌ʼ  ಅನ್ನು ಶಿಕ್ಷಣ, ಉದ್ಯಮ, ಸರ್ಕಾರಿ ಕ್ಷೇತ್ರಗಳ 1500 ತಜ್ಞರ ಸಮೀಕ್ಷೆಯ ಆಧಾರದಲ್ಲಿ ಸಿದ್ಧಪಡಿಸಲಾಗಿದ್ದು ಮುಂದಿನ ಎರಡು ಮತ್ತು 10 ವರ್ಷಗಳ ಅವಧಿಯಲ್ಲಿ ಜಾಗತಿಕ ಆರ್ಥಿಕತೆಗಳು ಎದುರಿಸುವ ಅಪಾಯಗಳನ್ನು ಅಂದಾಜಿಸುವ ಯತ್ನವನ್ನು ಮಾಡಿದೆ.

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆಗಳಲ್ಲಿ ಆಗ ಅಲ್ಲಿನ ಸಿಎಂ ಆಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವನ್ನು ಅವಕೋಕಿಸುವ ಬಿಬಿಸಿ ಸಾಕ್ಷ್ಯಚಿತ್ರದ ಉದಾಹರಣೆಯನ್ನೂ ಈ ವರದಿ ನೀಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಸಾಕ್ಷ್ಯಚಿತ್ರದ ವೀಡಿಯೋವನ್ನು ಟ್ವಿಟರ್‌, ಯುಟ್ಯೂಬ್‌ನಿಂದ ಕಳೆದ ವರ್ಷದ ಜನವರಿಯಲ್ಲಿ ತೆಗೆದುಹಾಕಿದ್ದನ್ನೂ ಉಲ್ಲೇಖಿಸಿರುವ ವರದಿ, “ಪ್ರಬುದ್ಧ ಪ್ರಜಾಪ್ರಭುತ್ವಗಳಲ್ಲೂ ಸಹ ನೈಜ ಅಥವಾ ಕಲ್ಪಿತ ವಿದೇಶಿ ಹಸ್ತಕ್ಷೇಪದ ಮೇಲಿನ ಕಾರ್ಯಾಚರಣೆಯು ಈಗಿರುವ ನಿಯಂತ್ರಣವನ್ನು ಬಲಪಡಿಸಲು ಬಳಸಬಹುದು ಎಂಬುದನ್ನು ವರದಿ ಎತ್ತಿ ತೋರಿಸಿದೆ.

ಕೃತಕ ಬುದ್ಧಿಮತ್ತೆ ಪ್ರೇರಿತ ಸುಳ್ಳು ಮಾಹಿತಿ ಅಭಿಯಾನಗಳೂ ಮತದಾರರ ಮೇಲೆ ಪ್ರಭಾವ ಬೀರಬಹುದು, ಪ್ರತಿಭಟನೆಗಳು, ಹಿಂಸೆಗೆ ಕಾರಣವಾಗಿ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಅವನತಿಗೆ ಕಾರಣವಾಗಬಹುದು ಎಂದು ವರದಿ ಹೇಳಿದೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News