ʼವಲಸೆ ತಡೆಯಿರಿ, ಉದ್ಯೋಗ ಒದಗಿಸಿʼ: ಬಿಹಾರದಲ್ಲಿ ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ, ಕನ್ಹಯ್ಯ ಕುಮಾರ್

Photo credit: PTI
ಪಟ್ನಾ: ಬಿಹಾರದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ವಲಸೆ ಪ್ರಮಾಣ ತೀವ್ರ ಸ್ವರೂಪದಲ್ಲಿ ಹೆಚ್ಚಳವಾಗಿರುವುದನ್ನು ಪ್ರತಿಭಟಿಸಿ, ಸೋಮವಾರ "ವಲಸೆ ತಡೆಯಿರಿ, ಉದ್ಯೋಗ ಒದಗಿಸಿ" ಪಾದಯಾತ್ರೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಕನ್ಹಯ್ಯ ಕುಮಾರ್ ಬಿಹಾರದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದರು.
ಬಿಹಾರದ ಬೇಗುಸರಾಯಿಯಿಂದ ಪಾದಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಕನ್ಹಯ್ಯ ಕುಮಾರ್, ನಿತೀಶ್ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿಯ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಿಹಾರದಲ್ಲಿ ನಿರುದ್ಯೋಗ ಹಾಗೂ ವಲಸೆ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ 'ವಲಸೆ ತಡೆಯಿರಿ, ಉದ್ಯೋಗ ಒದಗಿಸಿ' ಪಾದಯಾತ್ರೆಯ ಕುರಿತು ವ್ಯಂಗ್ಯವಾಡಿದ ಬಿಜೆಪಿ ನಾಯಕ ಶೆಹಝಾದ್ ಪೂನಾವಾಲಾ, "ರಾಹುಲ್ ಗಾಂಧಿ ಬಿಳಿ ಬಣ್ಣದ ಟೀಶರ್ಟ್ ಧರಿಸಿ ಬಿಹಾರದಲ್ಲಿ 'ವಲಸೆ ತಡೆಯಿರಿ, ಉದ್ಯೋಗ ಒದಗಿಸಿ' ಅಭಿಯಾನವನ್ನು ಪ್ರಾರಂಭಿಸುವುದಕ್ಕೂ ಮುನ್ನ, ಹಣದುಬ್ಬರ, ಲೂಟಿಯನ್ನು ನಿಲ್ಲಿಸಿ ಹಾಗೂ ಭರವಸೆ ನೀಡಿರುವ ಸರಕಾರಿ ಉದ್ಯೋಗಗಳನ್ನು ಒದಗಿಸಿ ಎಂದು ಹೇಳಲು ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕಕ್ಕೆ ಅವರು ಯಾವ ಬಣ್ಣದ ಟೀಶರ್ಟ್ ಧರಿಸಿ ಹೋಗಲಿದ್ದಾರೆ ಎಂಬುದನ್ನು ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಬೇಗುಸರೈಗೆ ರಾಹುಲ್ ಗಾಂಧಿ ನೀಡಿರುವ ಭೇಟಿಯ ಕುರಿತು ಬಿಜೆಪಿಯ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಆರ್ಜೆಡಿ ನಾಯಕ ಮೃತ್ಯುಂಜಯ್ ತಿವಾರಿ, "ಇದು ಚುನಾವಣಾ ವರ್ಷವಾಗಿದ್ದು, ಹಲವರು ಇಲ್ಲಿಗೆ ಬಂದು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಲೋಕಸಭಾ ವಿಪಕ್ಷ ನಾಯಕರಾಗಿದ್ದು, ಅವರೂ ಕೂಡಾ ಇಲ್ಲಿಗೆ ಬಂದು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ತೊಂದರೆಯೇನಿದೆ? ಎನ್ಡಿಎ ಮೈತ್ರಿಕೂಟವು ರಾಹುಲ್ ಗಾಂಧಿ-ತೇಜಸ್ವಿ ಯಾದವ್ ಜೋಡಿಯ ಬಗ್ಗೆ ಕಳವಳಗೊಂಡಿದೆ. ಸ್ಪರ್ಧೆ ಸ್ಪಷ್ಟವಾಗಿದ್ದು, ಸಾರ್ವಜನಿಕರು ತೇಜಸ್ವಿ ಯಾದವ್ರನ್ನು ಆಶೀರ್ವದಿಸಲು ಸಿದ್ಧರಾಗಿದ್ದಾರೆ. ತಾನು ಯಾರ ಮುಖವಾಡ ಧರಿಸಿಕೊಂಡು ಬಿಜೆಪಿಯಲ್ಲಿದ್ದೇನೆ ಎಂಬುದನ್ನು ಬಿಜೆಪಿ ಹೇಳಬೇಕು. ಅವರು ನಿತೀಶ್ ಕುಮಾರ್ ಕಾರಣಕ್ಕೆ ಬಿಹಾರದಲ್ಲಿ ಅಧಿಕಾರದಲ್ಲಿದ್ದಾರೆ. 2025ರಲ್ಲಿ ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸರಕಾರ ರಚಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ತಿರುಗೇಟು ನೀಡಿದ್ದಾರೆ.