ರಾಜಸ್ಥಾನ | ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ

Update: 2024-05-20 16:27 GMT

PC : ANI 

ಭಿಲ್ವಾರ (ರಾಜಸ್ಥಾನ): ಕಳೆದ ವರ್ಷ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಉರಿಯುತ್ತಿರುವ ಕಲ್ಲಿದ್ದಲ ಕುಲುಮೆಗೆ ಎಸೆದು ಜೀವಂತವಾಗಿ ಸುಟ್ಟು ಹಾಕಿದ್ದ ಇಬ್ಬರು ಆರೋಪಿಗಳಿಗೆ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಪೋಕ್ಸೊ ನ್ಯಾಯಾಲಯವೊಂದು ಸೋಮವಾರ ಮರಣ ದಂಡನೆ ವಿಧಿಸಿದೆ.

ಈ ವಿಷಯವನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮಹಾವೀರ್ ಸಿಂಗ್ ಕಿಷ್ಣಾವತ್ ತಿಳಿಸಿದ್ದಾರೆ. ‘‘ಆರೋಪಿಗಳಾದ ಕಾಳು ಮತ್ತು ಕಣ್ಣ ಎಂಬವರಿಗೆ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ’’ ಎಂದು ಅವರು ಹೇಳಿದರು.

ನ್ಯಾಯಾಲಯವು ಶನಿವಾರ ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ಘೋಷಿಸಿತ್ತು. ಅದೇ ವೇಳೆ, ಸಾಕ್ಷ್ಯ ನಾಶ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದ ಇತರ ಏಳು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು.

ಈ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಆರೋಪಿಗಳ ಪರ ವಕೀಲರು ಹೇಳಿದ್ದಾರೆ.

2023 ಆಗಸ್ಟ್ 2ರಂದು ದನಗಳನ್ನು ಮೇಯಿಸಲು ಹೊರಗೆ ಹೋಗಿದ್ದ 14 ವರ್ಷದ ಬಾಲಕಿಯು ನಾಪತ್ತೆಯಾಗಿದ್ದಳು. ಶೋಧ ಕಾರ್ಯ ನಡೆಸಿದ ಊರವರಿಗೆ ಬಾಲಕಿಯ ಶೂಗಳು ಮತ್ತು ಬ್ರೇಸ್ಲೆಟ್ ಗಳು ಕಲ್ಲಿದ್ದಲು ಕುಲುಮೆಯ ಬಳಿ ಪತ್ತೆಯಾದವು. ಭಾರೀ ಮಳೆಯ ಹೊರತಾಗಿಯೂ ಒಂದು ಕುಲುಮೆ ಉರಿಯುತ್ತಿರುವುದನ್ನು ನೋಡಿ ಅವರಲ್ಲಿ ಸಂಶಯ ಹುಟ್ಟಿತು. ಸಮೀಪದಲ್ಲೇ ಮಾನವ ಮೂಳೆಗಳೂ ಪತ್ತೆಯಾದವು.

ಪೊಲೀಸರು ಕಲ್ಲಿದ್ದಲು ಕುಲುಮೆಯ ನಾಲ್ವರು ಉಸ್ತುವಾರಿಗಳನ್ನು ವಶಕ್ಕೆ ಪಡೆದುಕೊಂಡರು. ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ಪ್ರಾಥಮಿಕ ತನಿಖೆ ಮತ್ತು ವಿವರವಾದ ತನಿಖೆಯ ಆಧಾರದಲ್ಲಿ ಪೊಲೀಸರು ಕಾಳು (25), ಕಣ್ಣ (21), ಸಂಜಯ್ (20) ಮತ್ತು ಪಪ್ಪು (35) ಎಂಬವರನ್ನು ಬಂಧಿಸಿದರು.

ಬಾಲಕಿಯನ್ನು ಅತ್ಯಾಚಾರ ಮಾಡಿದ ಬಳಿಕ ಅವಳನ್ನು ಕಲ್ಲಿದ್ದಲ ಕುಲುಮೆಗೆ ಎಸೆದಿರುವುದನ್ನು ಮತ್ತು ಪೊಲೀಸರ ತನಿಖೆಯ ಬಳಿಕ ದೇಹದ ಕೆಲವು ಭಾಗಗಳನ್ನು ಸಮೀಪದ ಕೆರೆಯೊಂದಕ್ಕೆ ಎಸೆದಿರುವುದನ್ನು ಆರೋಪಿಗಳು ಒಪ್ಪಿಕೊಂಡರು ಎನ್ನಲಾಗಿದೆ. ಮೃತದೇಹದ ಅವಶೇಷಗಳನ್ನು ಬಾಲಕಿಯ ಮನೆಯವರಿಗೂ ಗುರುತಿಸಲು ಸಾಧ್ಯವಾಗಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News