ಶಿವಸೇನೆಯಲ್ಲಿ ಬಿರುಕು, ಶೀಘ್ರ ಮಹಾರಾಷ್ಟ್ರದಲ್ಲಿ ಮೂರನೇ ಡಿಸಿಎಂ ನೇಮಕ: ಸಂಜಯ ರಾವುತ್

ಸಂಜಯ ರಾವುತ್ | PC : PTI
ಮುಂಬೈ: ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆಯವರ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ ಶಿವಸೇನೆ (ಯುಬಿಟಿ) ನಾಯಕ ಸಂಜಯ ರಾವುತ್ ಅವರು, ಶಿಂದೆಯವರ ಪಕ್ಷದಲ್ಲಿ ಬಿರುಕು ಮೂಡಿದೆ ಮತ್ತು ರಾಜ್ಯವು ಭಿನ್ನಮತೀಯ ಬಣದಿಂದ ಮೂರನೇ ಉಪ ಮುಖ್ಯಮಂತ್ರಿಯನ್ನು ಹೊಂದಲಿದೆ ಎಂದು ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತೆರೆಮರೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ರಾಜ್ಯವು ಮೂವರು ಉಪಮುಖ್ಯಮಂತ್ರಿಗಳನ್ನು ಹೊಂದುವ ಸಾಧ್ಯತೆಯಿದೆ. ಶಿಂದೆ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ, ನಿನ್ನೆ ಅವರು ಮುಖ್ಯಮಂತ್ರಿಯಾಗಿದ್ದರು. ಈಗ ಅವರದೇ ಪಕ್ಷದಿಂದ ಮೂರನೇ ಉಪ ಮುಖ್ಯಮಂತ್ರಿ ನೇಮಕವಾಗುವುದರಿಂದ ಅವರು ಆ ಸ್ಥಾನದಲ್ಲಿ ಇರದಿರಬಹುದು. ಅವರು ಈ ಬಗ್ಗೆ ಯೋಚಿಸಬೇಕು ಎಂದರು.
ಬಿಜೆಪಿಯನ್ನು ಉಲ್ಲೇಖಿಸಿ ಅವರು, ಶಿಂದೆ ಮಹಾರಾಷ್ಟ್ರದ ಶತ್ರುಗಳ ಸೇವೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೈಗಾರಿಕಾ ಸಚಿವ ಉದಯ್ ಸಾಮಂತ್ ಅವರು 20 ಶಾಸಕರ ಬೆಂಬಲವನ್ನು ಹೊಂದಿರುವುದರಿಂದ ಅವರು ಶಿಂದೆ ನೇತೃತ್ವದ ಶಿವಸೇನೆಯನ್ನು ವಿಭಜಿಸಬಹುದು ಎಂದು ರಾವುತ್ ಇತ್ತೀಚಿಗೆ ಹೇಳಿದ್ದರು.